ಚಿತ್ರಾಪು ಬಳಿ ಚಿರತೆ ಪ್ರತ್ಯಕ್ಷ
ಮೂಲ್ಕಿ: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಚಿರತೆ ಮೂಲ್ಕಿ ನಗರ ವ್ಯಾಪ್ತಿಯ ಚಿತ್ರಾಪುಅಶ್ವತ್ಥ ಕಟ್ಟೆ ಬಳಿ ಭಾನುವಾರ ಸಂಜೆ ಸುಮಾರು 8 ಗಂಟೆಗೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಮೂಲ್ಕಿ ಚಿತ್ರಾಪು ಪ್ರಧಾನ ಸಂಪರ್ಕ ರಸ್ತೆಯ ಅಶ್ವತ್ಥಕಟ್ಟೆ ಬಳಿ ಸ್ಥಳೀಯರು ನಡೆದುಕೊಂಡು ಹೋಗುತ್ತಿರುವಾಗ ಎದುರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರಾದ ಸಂದೀಪ್ ಚಿತ್ರಾಪು ಮಾಹಿತಿ ನೀಡಿದ್ದಾರೆ.
ಕಳೆದ ದಿನದ ಹಿಂದೆ ಮೂಲ್ಕಿ ಪೊಲೀಸ್ ಠಾಣೆ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಬಳಿಕ ಕೊಕ್ಕರಕಲ್ ಮೂಲಕ ಚಿತ್ರಾಪು ಮರದ ಮಿಲ್ ಕಡೆಗೆ ಹೋಗಿತ್ತು. ಮರುದಿನ ಮೂಲ್ಕಿ ಮೆಡಲಿನ್ ಶಾಲೆ ಬಳಿಯ ಡಂಪಿಂಗ್ ಯಾರ್ಡ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ಕೆಲಸಗಾರರು ಭಯ ಬೀತರಾಗಿದ್ದರು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಬಳಿಕ ಕೊಕ್ಕರಕಲ್ ಬಳಿ ಚಿರತೆ ಹಿಡಿಯಲು 2 ಬೋನ್ ಇರಿಸಲಾಗಿದ್ದು ಫಲಪ್ರದವಾಗಿರಲಿಲ್ಲ. ಸ್ಥಳಕ್ಕೆ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ, ಅರಣ್ಯ ಇಲಾಖೆ ಅಧಿಕಾರಿಗಳು ಕೋಟೆಕೊಪ್ಪಲ ಬಬ್ಬು ಸ್ವಾಮಿ ದೈವಸ್ಥಾನ ಚರಂತಿಪೇಟೆ ಹಾಗೂ ಧಾಮ ರೆಸಿಡೆನ್ಸಿ ಕೊಕ್ಕರಕಲ್ ಬಳಿ ಭೇಟಿ ಕೊಟ್ಟು ಸ್ಥಳೀಯರ ಜತೆ ಸಂಪರ್ಕ ಮಾಡಿ ಧೈರ್ಯ ತುಂಬಿದ್ದಾರೆ.