ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ: 10.45 ಕೋಟಿ ರೂ. ನಿವ್ವಳ ಲಾಭ: ಶೇ.10 ಡಿವಿಡೆಂಡ್ ಘೋಷಣೆ
ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ಸೆ.22 ರಂದು ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ(ಲೊಯೊಲಾ ಹಾಲ್) ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ನಿರ್ದೇಶಕ ಡೇವಿಡ್ ಡಿಸೋಜ ಅವರು ಉದ್ಘಾಟಿಸಿದರು.
ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಎಡ್ಮಂಡ್ ಫ್ರಾಂಕ್ (ಮಾಜಿ ಉಪಾಧ್ಯಕ್ಷರು ಎಂ.ಸಿ.ಸಿ. ಬ್ಯಾಂಕ್), ಬ್ಯಾಂಕಿನ ಸದಸ್ಯರಾದ ರೋನ್ಸ್ ಬಂಟ್ವಾಳ್, ರೋಹನ್ ಮೊಂತೇರೊ, (ಮ್ಯಾನೇಜಿಂಗ್ ಡೈರೆಕ್ಟರ್, ರೋಹನ್ ಕಾರ್ಪೊರೇಶನ್) ಪಿಯುಸ್ ಎಲ್. ರೊಡ್ರಿಗಸ್(ಮಾಜಿ ನಿರ್ದೇಶಕರು ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ) ಮತ್ತು ಲುವಿ ಪಿಂಟೊ (ಅಧ್ಯಕ್ಶರು, ಮಾಂಡ್ ಸೊಭಾಣ್) ಇವರು ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಸಂಸ್ಥಾಪಕರಿಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಗೌರವಿಸಿದರು.
ಬಳಿಕ ಮಾತನಾಡಿದ ಅನಿಲ್ ಲೋಬೋ ಅವರು, ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇ.10 ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ, ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು 10.45 ಕೋಟಿ ರೂ. ಆಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.
ಎಂ.ಸಿ.ಸಿ. ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇ.10 ಪ್ರಗತಿ ಸಾಧಿಸಿದ್ದು, 635.70 ಕೋಟಿ ರೂ. ಠೇವಣಿ, ಒಟ್ಟು ಮುಂಗಡದಲ್ಲಿ ಶೇ.25.21 ರೂ. ಪ್ರಗತಿ ಸಾಧಿಸಿದ್ದು 444.88 ಕೋಟಿ ರೂ. ಮುಂಗಡಗಳು, ದುಡಿಯುವ ಬಂಡವಾಳ 752.95 ಕೋಟಿ ರೂ.(ಪ್ರಗತಿ ಶೇಕಡಾ 10.03) ಮತ್ತು ಶೇರು ಬಂಡವಾಳ 31.21 ಕೋಟಿ ರೂ.(ಪ್ರಗತಿ ಶೇಕಡಾ 14.07) ಆಗಿದೆ ಎಂದರು.
ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ.1.37 ರಿಂದ ಶೇ.1.12ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು ಶೇ.78.34 ಆಗಿರುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇ.9ಕ್ಕಿಂತ ಹೆಚ್ಚಿದ್ದು, ಶೇ.23.06 ಇರುತ್ತದೆ ಎಂದು ಹೇಳಿದರು.
ಬ್ಯಾಂಕ್ 2023-24ನೇ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ವ್ಯವಹಾರದ ಮೈಲುಗಲ್ಲನ್ನು ದಾಟಿರುತ್ತದೆ. ಬ್ಯಾಂಕ್ ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿಯ ಬ್ಯಾಂಕಾಗಿ ಗುರುತಿಸಲ್ಪಟ್ಟಿದ್ದು ಬ್ಯಾಂಕ್ ಆರ್ಥಿಕವಾಗಿ ಸುಧ್ರಡವಾಗಿದೆ ಎಂಬುದನ್ನುತೋರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡಗಳನ್ನು ಪೂರ್ಣಗೊಳಿಸಿ ಬ್ರಹ್ಮಾವರದಲ್ಲಿ ಮಾರ್ಚ್ ತಿಂಗಳಲ್ಲಿ 17ನೇ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿ ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳನ್ನು ಅಭಿನಂದಿಸಿದರು.
ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಹಾಗೂ ಹೊಸ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಯನ್ನು ನೀಡಿದೆ. ಇದಕ್ಕಾಗಿ ಎಲ್ಲಾ ನಿರ್ದೇಶಕರಿಗೆ, ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದಿಸಿದರು. ಸಾಲಗಾರರು ಸಾಲವನ್ನು ಪಡೆದು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡಿರುವುದರಿಂದ ಬ್ಯಾಂಕ್ ಉತ್ತಮ ಲಾಭವನ್ನು ಗಳಿಸಿ ಬ್ಯಾಂಕಿನ ಎನ್.ಪಿ.ಎ. ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಿದೆ ಎಂದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ 105ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿಗಳನ್ನು ಓದಿದರು. 2023-24ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, 2024-25ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು 2024-25ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ನಿರ್ದೇಶಕರಾದ ಅಂಡ್ರ್ಯೂ ಡಿಸೋಜ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ.ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.
ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ವಂದಿಸಿದರು.