ತಿರುಪತಿ ಘಟನೆ ಸಮಾಜಕ್ಕೆ ಬಗೆದ ದ್ರೋಹ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
Sunday, September 22, 2024
ಉಡುಪಿ: ತಿರುಪತಿ ತಿಮ್ಮಪ್ಪನ ನೈವೇದ್ಯವಾದ ಲಡ್ಡುಪ್ರಸಾದವನ್ನು ಶುದ್ಧ ತುಪ್ಪಕ್ಕೆ ಬದಲಾಗಿ ಪ್ರಾಣಿಜನ್ಯ ವಸ್ತುಗಳನ್ನು ಬಳಸಿ ಸಿದ್ಧಪಡಿಸಿ ವಿತರಿಸಿರುವುದು ಸಮಾಜಕ್ಕೆ ಬಗೆದ ದ್ರೋಹ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಮನೆಗಳಲ್ಲೂ ಇಂಥ ಕಲಬೆರಕೆ ತುಪ್ಪ ಬಳಕೆ ಮಾಡುವುದಿಲ್ಲ. ಅಂಥದ್ದರಲ್ಲಿ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ತಿರುಪತಿಯಲ್ಲಿ ನಡೆದ ಈ ಕೃತ್ಯ ಘೋರ ಅಪರಾಧ. ಗೋವು ರಕ್ಷಣೆಗಾಗಿ ಎದ್ದುಬಂದ ಶ್ರೀನಿವಾಸನ ಸನ್ನಿಧಿಯಲ್ಲಿ ಗೋವಿನ ತುಪ್ಪದ ಹೆಸರಿನಲ್ಲಿ ಕಲಬೆರಕೆ ನಡೆಯುತ್ತಿರುವುದು ಖೇದಕರ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ಇಂಥ ಘಟನೆಗಳು ಇನ್ನು ಮುಂದೆ ಯಾವುದೇ ದೇವಸ್ಥಾನಗಳಲ್ಲಿ ನಡೆಯಕೂಡದು. ಮಾತ್ರವಲ್ಲದೇ, ದೇವಾಲಯಗಳು ಸರ್ಕಾರದ ಕಪಿಮುಷ್ಟಿಗೆ ಬದಲಾಗಿ ಸಾರ್ವಜನಿಕ ಹಿಂದೂಗಳ ಸಂಸ್ಥೆಗೆ ನೀಡಬೇಕೆಂಬ ನ್ಯಾಯಾಲಯದ ಸೂಚನೆಯನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.