ಆಯುರ್ವೇದದಲ್ಲಿ ಹೊಸತನ ಅಳವಡಿಸಿಕೊಳ್ಳಲು ಮೋಹನ್ ಆಳ್ವ ಕರೆ
ಉಡುಪಿ: ಆಯುರ್ವೇದ ಭಾರತೀಯ ಮೂಲ ವೈದ್ಯ ಪದ್ಧತಿಯಾಗಿದ್ದು, ಅದು ಪರ್ಯಾಯ ಚಿಕಿತ್ಸಾ ಕ್ರಮ ಅಲ್ಲ. ಅಲೋಪಥಿ ಮತ್ತಿತರ ಚಿಕಿತ್ಸಾ ಪದ್ಧತಿಗಳು ಪರ್ಯಾಯ ವೈದ್ಯ ಪದ್ಧತಿಗಳಾಗಿವೆ. ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಆಧುನಿಕತೆ ಮೈಗೂಡಿಸಿಕೊಳ್ಳದ ಪರಿಣಾಮ ಆಯುರ್ವೇದ ಸೊರಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಿಷಾದಿಸಿದರು.
ಶುಕ್ರವಾರ ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಮಣಿಪಾಲದ ಮುನಿಯಾಲು ಆಯುವೇದ ಆರೋಗ್ಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.
ವೈಯಕ್ತಿಯ ಆರೋಗ್ಯ ಹಾಗೂ ದೇಶ ಮತ್ತು ಸಮಾಜ ಸ್ವಾಸ್ಥ್ಯವನ್ನು ಎಲ್ಲ ವಿಜ್ಞಾನಗಳ ಆಶಯ. ಆಯುರ್ವೇದದಲ್ಲಿ ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆ ಇದೆ. ಸುಮಾರು 195 ಬಗೆಯ ಶಸ್ತ್ರಚಿಕಿತ್ಸೆಯ ಉಲ್ಲೇಖ ಇದೆ. ಇಷ್ಟೆಲ್ಲ ಇದ್ದಾಗ್ಯೂ ಚಿಕಿತ್ಸಾ ಕ್ರಮ, ಔಷಧ ಇತ್ಯಾದಿಗಳನ್ನು ರಹಸ್ಯವಾಗಿಟ್ಟಿರುವುದು, ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಆಧುನಿಕತೆಯಲ್ಲಿ ಒಗ್ಗದಿರುವುದು ಜೊತೆಗೆ ದಾಖಲೀಕರಣ ಇಲ್ಲದಿರುವುದು ಆಯುರ್ವೇದದ ಮಾನ್ಯತೆಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಯುವ ವೈದ್ಯರು ಆಯುರ್ವೇದದ ತಳಸ್ಪರ್ಶಿ ಅಧ್ಯಯನದ ಜೊತೆಗೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿಜಯಭಾನು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಸತ್ಯನಾರಾಯಣ ಭಟ್ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ದೇಶಕಿ ಡಾ. ಶ್ರದ್ಧಾ ಶೆಟ್ಟಿ ಪ್ರಸ್ತಾವನೆಗೈದರು. ಡಾ. ಗುರುರಾಜ್ ಸ್ವಾಗತಿಸಿ, ಹರಿಪ್ರಸಾದ ಭಟ್ ವಂದಿಸಿದರು. ಡಾ. ಪ್ರೀತಿ ಪಾಟೀಲ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಡಾ. ಶುಭಾ ಎಂ. ಸಹಕರಿಸಿದರು.