ಜಮೀರ್ ವಿರುದ್ಧ ಅಬ್ರಹಾಂ ಗುಡುಗು
ಉಡುಪಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಹಗುರವಾಗಿ ಮಾತನಾಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮುಡಾ ಹಗರಣದ ದೂರುದಾರರಲ್ಲಿ ಒಬ್ಬರಾದ ಟಿ.ಜೆ. ಅಬ್ರಹಾಂ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕೋರ್ಟ್, ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿರುವಾಗ ‘ಇದೊಂದು ರಾಜಕೀಯ ತೀರ್ಪು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿರುವ ಟಿ.ಜೆ. ಅಬ್ರಹಾಂ, ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಎಂದರೆ ಹುಡುಗಾಟವೇ? ರಾಜಕಾರಣದಲ್ಲಿ ಭಾಷಣ ಬಿಗಿದಂತೆ ಮಾತನಾಡಿದರೆ ಆಗುತ್ತದೆಯೇ? ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನ್ಯಾಯಾಲಯದ ತೀರ್ಪನ್ನು ಪೊಲಿಟಿಕಲ್ ತೀರ್ಪು ಎಂದು ಹೇಳುವ ಮೂಲಕ ನ್ಯಾಯಾಧೀಶರನ್ನು ರಾಜಕಾರಣಿಗಳ ಮಟ್ಟಕ್ಕೆ ಇಳಿಸುತ್ತೀರಾ? ನ್ಯಾಯಾಲಯದ ಬಗ್ಗೆ ಭಯ ಭಕ್ತಿ ಬೇಡವೇ? ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬ ಪ್ರಜ್ಞೆ ಬೇಡವೇ? ನನ್ನ ಬಗ್ಗೆ ಮಾತನಾಡಿ ಪರವಾಗಿಲ್ಲ, ನ್ಯಾಯಾಲಯದ ಬಗ್ಗೆ ಹಗುರಾಗಿ ಮಾತನಾಡಕೂಡದು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಅಬ್ರಹಾಂ ಎಚ್ಚರಿಕೆ ನೀಡಿದ್ದಾರೆ.