ಅಕ್ರಮ ಮರಳು ಸಾಗಾಟ, ಲಾರಿ ವಶ
Friday, September 20, 2024
ಉಳ್ಳಾಲ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಗಸ್ತು ನಿರತ ಪೊಲೀಸರು ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ ನಡೆದಿದೆ.
ಕಲ್ಲಾಪು ಪಟ್ಲ ಎಂಬಲ್ಲಿ ನದಿ ಕಿನಾರೆಯಿಂದ ಮರಳನ್ನು ಕಳ್ಳತನ ಮಾಡಿ ಚಾಲಕ ಮುನಾಜ್ ಯಾನೆ ಮುನ್ನಾ ಎಂಬಾತ ಈಚರ್ ಟಿಪ್ಪರ್ ಲಾರಿ ವಾಹನದಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕೋಟೆಕಾರ್ನಲ್ಲಿ ಕರ್ತವ್ಯದಲ್ಲಿದ್ದ ಉಳ್ಳಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ವೈ ಮತ್ತು ಸಿಬ್ಬಂದಿ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಈ ವೇಳೆ ಟಿಪ್ಪರ್ ಲಾರಿ ಚಾಲಕ ಮುನಾಜ್ ಯಾನೆ ಮುನ್ನಾ ಎಂಬಾತ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದು, ಪೊಲೀಸರು ಟಿಪ್ಪರ್ ಲಾರಿ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.