ಅಕ್ರಮ ದನ ಸಾಗಾಟ: ನಾಲ್ವರ ಸೆರೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆ ಹಚ್ಚಿರುವ ಬೆಳ್ತಂಗಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಎರಡು ಪಿಕಪ್ ವಾಹನಗಳು ಹಾಗೂ ಐದು ದನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ (36) ಹಾಗೂ ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಬಂಧಿತ ಆರೋಪಿಗಳು.
ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಲವಂತಿಗೆ ಗ್ರಾಮದ ಕಜಕೆ ಎಂಬಲ್ಲಿ ಎಳನೀರು ಕಡೆಯಿಂದ ಬರುತ್ತಿದ್ದ ಎರಡು ಪಿಕಪ್ ವಾಹನಗಳನ್ನು ತಡೆದು ಪರಿಶೀಲಿಸಿದಾಗ ಐದು ದನಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿ ಇದ್ದವರ ಬಳಿ ದನಗಳ ಸಾಗಾಟಕ್ಕೆ ಯಾವುದೇ ಪರವಾನಿಗೆಗಳು ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.