ಉಪನ್ಯಾಸಕರ ವಿರುದ್ಧ ಪ್ರಕರಣ ದಾಖಲು: ಅ.15ರಂದು ಪ್ರತಿಭಟನೆ
ಮಂಗಳೂರು: ಉಪನ್ಯಾಸಕ ಡಾ.ಅರುಣ್ ಉಳ್ಳಾಲ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಿರುವ ವಿಶ್ವಹಿಂದೂ ಪರಿಷತ್ ಅ.15ರಂದು ಸಂಜೆ 5 ಗಂಟೆಗೆ ಉಳ್ಳಾಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್ ತಿಳಿಸಿದ್ದಾರೆ.
ಗುರುವಾರ ವಿಹಿಂಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳನ್ನು ಗುರಿಯಾಗಿರಿಸಿಕೊಂಡು ರಾಜ್ಯಸರ್ಕಾರ ವಿಭಜನೆಯ ರಾಜಕಾರಣ ಮಾಡುತ್ತಿದೆ ಇದನ್ನು ನಿಲ್ಲಿಸಬೇಕು. ಈ ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಾನಮನಸ್ಕರು, ಹಿಂದು ಸಂಘಟನೆಗಳು ಸೇರಿದಂತೆ ಹಲವು ಮಂದಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಹಿಂದು ಧರ್ಮದ ಬಗ್ಗೆ ಮಾತನಾಡುವವರ ಮೇಲೆ ಕೇಸು ಹಾಕಿ ಅವರ ಮನೋಸ್ಥೈರ್ಯ ಕುಗ್ಗಿಸುವ ಕೃತ್ಯದ ವಿರುದ್ಧ ರಾಷ್ಟ್ರಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಉಪನ್ಯಾಸಕ ಅರುಣ್ ಉಳ್ಳಾಲ್ ಅವರು ಉಳ್ಳಾಲದ ಶಿಶು ಮಂದಿರದ ನವದಂಪತಿಗಳ ಸಮಾವೇಶದಲ್ಲಿ ಸನಾತನ ಸಂಸ್ಕೃತಿಯ ಉಳಿವಿಗೋಸ್ಕರ ಹಿಂದು ಕುಟುಂಬಗಳು ಹೇಗಿರಬೇಕು ಎಂಬ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯಾವುದೇ ಧರ್ಮ, ಸಮುದಾಯವನ್ನು ಅವರು ದೂರಿಲ್ಲ. ಆದರೆ ಅವರ ಮೇಲೆ ಸುಮೋಟೋ ಕೇಸು ದಾಖಲಿಸಿರುವುದು ಖಂಡನೀಯ. ಪೊಲೀಸರು ತಕ್ಷಣ ಕೇಸು ಹಿಂಪಡೆಯಬೇಕು ಎಂದು ಶಿವಾನಂದ ಮೆಂಡನ್ ಹೇಳಿದರು.
ವಿಹಿಂಪ ಸೇವಾ ಪ್ರಮುಕ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್, ಉಳ್ಳಾಲ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ, ಉಳ್ಳಾಲ ಪ್ರಖಂಡ ಸಂಯೋಜಕ್ ಅರ್ಜುನ್ ಮಾಡೂರು ಉಪಸ್ಥಿತರಿದ್ದರು.