ಅ.29 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಮಂಗಳೂರು: ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-2024 ಅ.29ರಂದು ಮಂಗಳೂರಿನ ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ರಾಜ್ಯ ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ವಿಚಾರದಲ್ಲಿ ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜು
ಪ್ರಾಂಶುಪಾಲೆ ಡಾ.ಮಮತಾ ಕೆ.ಪಿ. ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಅ.29ರಿಂದ ಐದು ದಿನಗಳ ಕಾಲ ಆಯುರ್ವೇದ ದಿನಾಚರಣೆ ಬಗ್ಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಸಾರ್ವಜನಿಕರು ಸೆಲ್ಫಿ ಪಾಯಿಂಟ್ನಲ್ಲಿ ಸೆಲ್ಫಿ ತೆಗೆದು ಫೋಟೋವನ್ನು ayurvedaday.in ಲಿಂಕ್ನಲ್ಲಿ ಅಪ್ಲೋಡ್ ಮಾಡಿ ದೇಶೀಯ ಔಷಧ ಪದ್ಧತಿಯನ್ನು ಜನಪ್ರಿಯಗೊಳಿಸುವಲ್ಲಿ ಸಹಕಾರ ನೀಡಬೇಕು ಎಂದರು.
ಆಯುಷ್ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 800 ಆಯುಷ್ ಚಿಕಿತ್ಸಾಲಯಗಳಿದ್ದು, ಅವುಗಳಲ್ಲಿ ಕೆಲವು ಖಾಸಗಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ, ಆಯುರ್ವೇದ ಪಾನೀಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಪ್ರತಿ ವರ್ಷ ದೀಪಾವಳಿ ಮುನ್ನಾ ದಿನ ಆಯುಷ್ ದಿನಾಚರಣೆ ಆಚರಿಸಲಾಗುತ್ತಿದೆ. ಆಯುರ್ವೇದದಿಂದ ಭಾರತೀಯರು ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆರೋಗ್ಯವಂತ ಜೀವನಪದ್ಧತಿ ಅಳವಡಿಸುವ ಮೂಲಕ ಹಿರಿಯರು ನೂರಾರು ವರ್ಷ ಬಾಳಿ ಬದುಕುತ್ತಿದ್ದರು. ಕೋವಿಡ್ ಗೆಲ್ಲಲು ಆಯುರ್ವೇದ ಕೊಡುಗೆ ಮಹತ್ವದ್ದಾಗಿದ್ದು, ದೇಶದ ಪ್ರಮುಖ ಚಿಕಿತ್ಸಾ ಪದ್ಧತಿಯಾಗಿ ಆಯುರ್ವೇದವನ್ನು ಮುಂಚೂಣಿಗೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಆಯುರ್ವೇದ ದಿನಾಚರಣೆ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಯುರ್ವೇದ ಬಗ್ಗೆ ಹೆಚ್ಚಿನ ಅರಿವು, ಪ್ರಚಾರ ಮೂಡಿಸಬೇಕಾದ ಅಗತ್ಯವಿದೆ. ಶೀತದಿಂದ ತೊಡಗಿ ಕ್ಯಾನ್ಸರ್ ವರೆಗೂ ಆಯುರ್ವೇದದಲ್ಲಿ ಚಿಕಿತ್ಸೆ ಇದೆ. ಕ್ಯಾನ್ಸರ್ಗೆ ಸಂಬಂಧಿಸಿ ಆಯುಷ್ ವಿಭಾಗದಿಂದ ಪ್ರತ್ಯೇಕ ಕೋರ್ಸ್ಗೂ ಸಿದ್ಧತೆ ನಡೆಯುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ನಾಯಕ್ ಹೇಳಿದರು.
ಆಸ್ಪತ್ರೆ ಮಂಜೂರು...
ಮಂಗಳೂರಿನ ಉಳ್ಳಾಲ ಹಾಗೂ ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆ ತೆರೆಯಲು ಸಿದ್ಧತೆ ನಡೆಯುತ್ತಿದೆ. ಉಳ್ಳಾಲದಲ್ಲಿ ಜಾಗ ಗುರುತಿಸಲಾಗಿದ್ದು, ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿದೆ. ಪುತ್ತೂರಿನಲ್ಲಿ ಜಾಗ ಗುರುತಿಸಿದ ಕೂಡಲೇ ಕಾರ್ಯಸಾಧ್ಯತಾ ವರದಿ ಸಿದ್ಧವಾಗಲಿದೆ. ಇದು 30 ಬೆಡ್ಗಳ ಆಸ್ಪತ್ರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ.
ಉಚಿತ ಕ್ಷಾರ ಚಿಕಿತ್ಸೆ..
ಮಂಗಳೂರಿನ ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೇ ಶುಕ್ರವಾರದಂದು ಉಚಿತ ಕ್ಷಾರ ಚಿಕಿತ್ಸೆ ನಡೆಯಲಿದೆ. ನುರಿತ ಕ್ಷಾರ ಚಿಕಿತ್ಸಾ ತಜ್ಞರಾದ ಪುತ್ತೂರಿನ ಡಾ.ರವಿಶಂಕರ ಪೆರುವಾಜೆ ಮತ್ತು ಡಾ.ಶೋಭಾ ರಾಣಿ ಕ್ಷಾರ ಚಿಕಿತ್ಸೆ ನೀಡಲಿದ್ದಾರೆ. ಪೈಲ್ಸ್, ಪಿಸ್ತೂಲ ಮತ್ತಿತರ ಗುದದ್ವಾರದ ತೊಂದರೆಗಳಿಗೆ ಕ್ಷಾರ ಚಿಕಿತ್ಸೆ ಮೂಲಕ ಯಶಸ್ವಿ ಶಮನಗೊಳಿಸಲಾಗುವುದು
ಆಯುರ್ವೇದ ವೈದ್ಯರಾದ ಡಾ. ಸಚಿನ್ ನಡ್ಕ, ಡಾ.ಕೃಷ್ಣ ಗೋಖಲೆ, ಡಾ. ಆಶಾಜ್ಯೋತಿ ರೈ, ಡಾ.ಜನಾರ್ದನ ಹೆಬ್ಬಾರ್, ಡಾ.ದೇವದಾಸ್ ಮತ್ತಿತರರಿದ್ದರು.