ಕರುನಾಡನ್ನು ಸೆಳೆಯುವುದು ನಮ್ಮ ಮಂಗಳೂರು ದಸರಾ...
Thursday, October 3, 2024
ವಿಜಯದಶಮಿ ಎಂದು ಕರೆಯಲ್ಪಡುವ ದಸರಾ ಹಬ್ಬವನ್ನು ಕರ್ನಾಟಕದಲ್ಲಿ ಆಚರಿಸಲಾಗುವ ಪ್ರಮುಖ ನಾಡ ಹಬ್ಬವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುಸ ಸಂಕೇತವಾಗಿ ನಾಡಿನ ಜನತೆ ನಂಬುತ್ತಾರೆ.
ಮಂಗಳೂರು ದಸರಾವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಸ್ಥಾನದಲ್ಲಿ ಆಚರಿಸುತ್ತಾರೆ. ಇದನ್ನು ನವರಾತ್ರಿ ಹಬ್ಬ ಎಂದು ಕೂಡ ಕರೆಯಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಹುಲಿ ನೃತ್ಯ, ಸಿಂಹ ನೃತ್ಯ, ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ಮಂಗಳೂರು ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
ಪಿಲಿನಲಿಕೆ (ಹುಲಿ ವೇಷ)
ಪಿಲಿನಲಿಕೆ ಇದು ದಸರಾ ಸಂದರ್ಭದಲ್ಲಿ ಮಾಡುವ ನೃತ್ಯವಾಗಿದೆ. ಊರಿನ ವಿಶಿಷ್ಟ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಮತ್ತು ವೇಷಭೂಷಣಗಳನ್ನು ಧರಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು ಶಾರದಾ ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ.
ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು:
ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಇಡುತ್ತಾರೆ. ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ಪೂಜಿಸುತ್ತಾರೆ.
ಬೃಹತ್ ಮೆರವಣಿಗೆ:
ವಿಜಯದಶಮಿ ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಸ್ಥಾನದ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಮಹಾಗಣಪತಿ ಮತ್ತು ಶಾರದೆಯ ಜೊತೆಗೆ ನವದುರ್ಗೆಯರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.
ಮೆರವಣಿಗೆಯಲ್ಲಿ ಜನಪದ ನೃತ್ಯಗಳು, ಯಕ್ಷಗಾನ ಪಾತ್ರಗಳು, ಚಂಡೆ ಮತ್ತು ಪಿಲಿನಲಿಕೆ ಮತ್ತು ಕಲಾ ಪ್ರಕಾರಗಳನ್ನು ನಾವು ಇಲ್ಲಿ ಕಾಣಬಹುದು. ಇವುಗಳನ್ನು ನೋಡುವುದೇ ಒಂದು ಸುಂದರ ಕ್ಷಣ.
-ಶ್ರದ್ಧ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.
