ಪರಿಷತ್ ಉಪ ಚುನಾವಣೆ: ಬಿಜೆಪಿ ಗೆಲುವು ಶತಸಿದ್ಧ
Thursday, October 10, 2024
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕಿಶೋರ್ ಕುಮಾರ್ ಜಯಭೇರಿ ಸಾಧಿಸುವುದು ಶತಸಿದ್ಧ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಯೋಜನೆಗೆ ನಯಾಪೈಸೆ ಅನುದಾನ ಬಿಡುಗಡೆ ಯಾಗದೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಗಳು ಜನಸಾಮಾನ್ಯರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದು ಬಿ.ಜೆ.ಪಿ. ಸದಸ್ಯರ ಮತದ ಜತೆಗೆ ಪ್ರತಿಪಕ್ಷದ ಸದಸ್ಯರ ಮತಗಳು ಬಿ.ಜೆ.ಪಿ. ಅಭ್ಯರ್ಥಿಗೆ ದೊರೆಯುವ ವಿಶ್ವಾಸವಿದೆ ಆ ಮೂಲಕ ಅಭೂತಪೂರ್ವ ವಿಜಯ ನಮ್ಮದಾಗಲಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹೇಳಿದರು.
ಅವರು ಇಂದು ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಯಾಗಿ ಮುಡಿಪು ಕಂಬ್ಲಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮಂಗಳೂರು ಮಂಡಲದ ಬಿ.ಜೆ.ಪಿ.ಯ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅ.15 ರಂದು ಬಂಟ್ವಾಳದ ಬಂಟರ ಭವನದಲ್ಲಿ ಬಿ.ಜೆ.ಪಿ. ರಾಜ್ಯಧ್ಯಕ್ಷರಾದ ಬಿ.ವೈ. ವಿಜಯೇಂದ್ರ ರವರು ಆಗಮಿಸಲಿದ್ದು ವಿಧಾನ ಪರಿಷತ್ ಚುನಾವಣೆ ವಿಜಯದ ಕಹಳೆ ಮೊಳಗಿಸಲಿದ್ದಾರೆ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದರು. ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವತ್ತಬೈಲ್ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಾರ್ಯದರ್ಶಿ, ಮಂಡಲ ಪ್ರಭಾರಿ ದಿನೇಶ್ ಅಮ್ಟೂರ್, ವಕ್ತಾರರಾದ ಮೋಹನ್ ರಾಜ್ ಕೆ.ಆರ್., ದೇವದಾಸ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟು, ಸುಜೀತ್ ಮಾಡೂರು ಉಪಸ್ಥಿತರಿದ್ದರು.