ಎಕ್ಸ್ಪರ್ಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
ಯುವ ಜನತೆ ಸಾಧನೆಯ ಕನಸು ಹೊಂದಿರಬೇಕು: ಅಮಿತ್ ಸಿಂಗ್
ಮಂಗಳೂರು: ದೇಶದ ಯುವ ಜನತೆ ಸಾಧನೆಯ ಕನಸು ಹೊಂದಿರಬೇಕು. ಒಳ್ಳೆಯ ಮನುಷ್ಯರಾಗಿ ಭವ್ಯ ಭಾರತದ ಸಾಕಾರಕ್ಕೆ ವಿದ್ಯಾರ್ಥಿಗಳು ತಮ್ಮ ಕೊಡುಗೆ ನೀಡಬೇಕು ಎಂದು ಮಂಗಳೂರು ಪಶ್ಚಿಮ ವಲಯ ಇನ್ಸ್ಪೆಕ್ಟರ್ ಜನರಲ್ ಅಫ್ ಪೊಲೀಸ್ ಅಮಿತ್ ಸಿಂಗ್ ಹೇಳಿದರು.
ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧಿವಂತಿಕೆಗಿಂತ ಭಾವನಾತ್ಮಕ ಅಂಶಗಳೇ ಇಂದು ಮುಖ್ಯ ವಾಹಿನಿಯಲ್ಲಿದೆ. ಗುರಿ ಸಾಧನೆಯ ಪ್ರಯಾಣದಲ್ಲಿ ನಮ್ಮ ಆರೋಗ್ಯ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ನಿರಂತರ ಕಾಪಾಡಿಕೊಳ್ಳಬೇಕು. ಆಟೋಟ ಸ್ಪರ್ಧೆಗಳಿಂದ ನಮ್ಮ ಒತ್ತಡವನ್ನು ನಿವಾರಿಸಬಹುದು. ನೂರಾರು ಆಸೆ-ಆಕಾಂಕ್ಷೆಗಳನ್ನು ಸಾಧಿಸಲು ನಿರಂತರ ಪರಿಶ್ರಮವೂ ಬೇಕು. ಇದನ್ನು ಕ್ರೀಡಾ ಮನೋಭಾವದಿಂದ ಸಾಧಿಸಬಹುದು ಎಂದವರು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ, ಆಟೋಟ ಸ್ಪರ್ಧೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಇದು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಶಿಸ್ತು, ಆತ್ಮವಿಶ್ವಾಸ, ಸಂಯಮ ಸಹಿತ ಆರೋಗ್ಯವನ್ನು ಕಾಪಾಡುತ್ತದೆ ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಕ್ರೀಡಾಳುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತು ತಜ್ಞೆ ದೀಪಿಕಾ ಎ. ನಾಯಕ್, ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಉಪಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.
ಕ್ಯೂರಿ, ಡಾರ್ವಿನ್, ಐನ್ಸ್ಟೀನ್ ಮತ್ತು ರಾಮಾನುಜನ್ ತಂಡದ ಕ್ರೀಡಾಳುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶತ್ ಫಾತಿಮಾ ನಿರೂಪಿಸಿ, ವಂದಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.