ಆಳ್ವಾಸ್‌ನಲ್ಲಿ ‘ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ ಲೋಕಾರ್ಪಣೆ

ಆಳ್ವಾಸ್‌ನಲ್ಲಿ ‘ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ ಲೋಕಾರ್ಪಣೆ


ಮೂಡುಬಿದಿರೆ: ‘ಕಠಿಣ ಪರಿಶ್ರಮ, ಶ್ರಮದಲ್ಲಿನ ಭಕ್ತಿ, ಸಮರ್ಪಣಾ ಭಾವ ಮತ್ತು ಕಾರ್ಯ ಬದ್ಧತೆಯಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್ ಸತೀಶ್ ರೈ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ವತಿಯಿಂದ ವಿದ್ಯಾಗಿರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಿರ್ಮಾಣಗೊಂಡಿರುವ ‘ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಕ್ರೀಡಾಪಟುಗಳಲ್ಲಿ ಗೊಂದಲ ಬೇಡ. ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರಲಿ. ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ಹಾರೈಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಹಲವಾರು ನುರಿತ ತರಬೇತುದಾರರ ಸಹಕಾರದಿಂದ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಷ್ಟೀಯ ಮಟ್ಟ ಹಾಗೂ ಒಲಿಂಪಿಕ್ಸ್‌ನಲ್ಲಿ    ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಧಕರ ಹೆಸರುಗಳನ್ನು ಆಳ್ವಾಸ್ ಸಂಸ್ಥೆಯ ಹಲವು ಕಟ್ಟಡಗಳಿಗೆ ಇಡಲಾಗಿದೆ. ನೂತನವಾಗಿ ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಸೇರ್ಪಡೆಯಾಗಿದೆ. ಲೋಕನಾಥ ಬೋಳಾರ್ ಅವರನ್ನು ಮಾದರಿಯನ್ನಾಗಿಸಿ ಇಂದಿನ ಕ್ರೀಡಾ ವಿದ್ಯಾರ್ಥಿಗಳು ಅಭ್ಯಾಸ ನಡೆಸಬೇಕು. ಇದು ದೇಶದ ಮಟ್ಟದಲ್ಲಿ ಸಾಧನೆಗೈಯ್ಯಲು ಕ್ರೀಡಾಪಟುಗಳಿಗೆ ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು. 

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ನನ್ನ ಬದುಕಿನಲ್ಲಿ ಕಂಡ ಶ್ರೇಷ್ಠ ಕ್ರೀಡಾಪಟು ಲೋಕನಾಥ ಬೋಳಾರ್. ಅವರ ಪತ್ನಿ ಜಿಲ್ಲಾ ವೈದ್ಯಾಧಿಕಾರಿಯಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಡಾ. ದೇವಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ತಾಲ್ಲೂಕು ಮಟ್ಟದಲ್ಲಿ ಸಿಂಥೆಟಿಕ್ ಟ್ರ್ಯಾಕ್ ತರಲು ಹೆಚ್ಚು ಶ್ರಮಿಸಿದ ವ್ಯಕ್ತಿ ಆಳ್ವರು. ಅವರು ಎಲ್ಲ ಕೀಡಾಪಟುಗಳಿಗೆ ಮಾದರಿ ಎಂದು ಅಭಿನಂದಿಸಿದರು.

ಲೋಕನಾಥ ಬೋಳಾರ್ ಅವರ ಪತ್ನಿ ಡಾ. ದೇವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ  ಡಾ ಎಸ್. ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಆಲ್ವಿನ್ ಪಿಂಟೋ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ'ಸೋಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಇದ್ದರು.

ಬಳಿಕ ದಕ್ಷಿಣ ಕನ್ನಡ ವೇಯ್ಟ್ ಲಿಫ್ಟಿಂಗ್ ಸಂಘದ ಸಮಾಲೋಚನಾ ಸಭೆ ನಡೆಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ನಿಕಾಯದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article