ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Tuesday, October 8, 2024
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಬಪ್ಪನಾಡು ಬಳಿ ಕಾರು ಢಿಕ್ಕಿಯಾಗಿ ಪಾದಾಚಾರಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಬಪ್ಪನಾಡು ಬಳಿಯ ನಿವಾಸಿ ಸತೀಶ್ ಭಂಡಾರಿ (68) ಎಂದು ಗುರುತಿಸಲಾಗಿದೆ.
ಮೃತ ಸತೀಶ್ ಭಂಡಾರಿ ಭಾರೀ ಮಳೆ ಹಾಗೂ ಸಿಡಿಲಿನ ನಡುವೆ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸತೀಶ್ ಭಂಡಾರಿ ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಸತೀಶ್ ಭಂಡಾರಿ ಸುಮಾರು 35 ವರ್ಷಗಳ ಹಿಂದೆ ಕತಾರ್ನಲ್ಲಿ ಉದ್ಯೋಗದಲ್ಲಿದ್ದು ಬಳಿಕ ಊರಿನಲ್ಲಿ ಬಂದು ನೆಲೆಸಿದ್ದರು. ಮೃತರು ಪತ್ನಿ ಮಾಜಿ ನಗರ ಪಂಚಾಯತ್ ಸದಸ್ಯೆ ವಸಂತಿ ಭಂಡಾರಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.