`ತೇಜಸ್ವಿ' ಸಾಹಿತ್ಯ ಓದಿದವರು ಕೋಮುವಾದಿ-ಪರಿಸರ ವಿರೋಧಿಗಳಾಗಲು ಅಸಾಧ್ಯ: ಡಾ. ದೇರ್ಲ
Tuesday, October 1, 2024
ಪುತ್ತೂರು: ಪೂರ್ಣಚಂದ್ರ ತೇಜಸ್ವಿ ಅವರನ್ನು ಓದಿದ ಯಾರೇ ಆಗಲೀ ಅವರು ಕೋಮುವಾದಿ, ಪರಿಸರ ವಿರೋಧಿಗಳಾಗಲು ಸಾಧ್ಯವೇ ಇಲ್ಲ. ತೇಜಸ್ವಿಯವರ ಸಾಹಿತ್ಯಕ್ಕೆ ನಾವು ಹೋಗುವ ಮೂಲಕ ನಮ್ಮೊಳಗೆ ನಾಶವಾಗುವ ಸತ್ಯವನ್ನು ಮತ್ತೆ ತುಂಬಿಕೊಳ್ಳಲು ಸಾಧ್ಯ ಎಂದು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಸಾಹಿತಿ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಕರ್ನಾಟಕ ಸಂಘ ಪುತ್ತೂರು ನೇತೃತ್ವದಲ್ಲಿ ಅನುರಾಗ ವಠಾರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿ-ಕೃತಿ ಅವಕಲೋಕನ ಕಾರ್ಯಕ್ರಮದಲ್ಲಿ ತೇಜಸ್ವಿ ನುಡಿ ಚಿತ್ರಣದಲ್ಲಿ ಅವರು ಪರಿಸರವಾದಿ ತೇಜಸ್ವಿಯವರ ಕುರಿತು ಮಾತನಾಡಿದರು.
ಪರಿಸರದ ನಾಶವನ್ನು ತೇಜಸ್ವಿಯವರ ಹಾಗೆ ಅತ್ತ ವಿಜ್ಞಾನವೂ ಅಲ್ಲ. ಇತ್ತ ಸಾಹಿತ್ಯವೂ ಅಲ್ಲದ ಒಂದು ಸಮೀಕರಣದ ಮಾದರಿಯಲ್ಲಿ ತೆರೆದು ತೋರಿಸಿದ ಬೇರೊಬ್ಬ ಲೇಖಕ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಲ್ಲ. ಈ ಅರಿವು ಹೊಸ ತಲೆಮಾರಿಗೆ ಇದ್ದರಿಂದ ಇವತ್ತು ತೇಜಸ್ವಿಯವರನ್ನು ಆ ಮಟ್ಟದಲ್ಲಿ ಯುವಕರು ಬಿಂಬಿಸುತ್ತಿದ್ದಾರೆ. ನಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವ ಸಾಹಿತ್ಯವನ್ನು ತೇಜಸ್ವಿಯವರು ಕಟ್ಟಿಕೊಡುತ್ತಿದ್ದಾರೆ ಎಂಬ ಅರಿವು ತೇಜಸ್ವಿಯವರ ಸಾಹಿತ್ಯದಲ್ಲಿ ನಾವು ಯೋಚಿಸುವುದಕ್ಕೆ ಸಾಧ್ಯವಾಗಿದೆ.
ಜಾಗತಿಕ ತಾಪಮಾನದ ದಿನಮಾನದಲ್ಲಿ ಗಂಭೀರವಾಗಿ ಯೋಚನೆ ಮಾಡದೆ ಹೋದರೆ ಮುಂದೆ ನಾವು ನಮ್ಮ ಜಾತಿ, ಮತ,ಧರ್ಮ, ಭಾಷೆ, ಸಂಸ್ಕೃತಿ ಹಾಳಾಯಿತು ಎಂದು ಚರ್ಚೆ ಮಾಡುವ ಜೊತೆಗೆ ಪರಿಸರವ ಹಾಳಾಗಿದೆ ಎಂಬುದು ಬಹಳ ಮುಖ್ಯ. ಹಾಗಾಗಿ ನಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವ ಸಾಹಿತ್ಯವನ್ನು ತೇಜಸ್ವಿಯವರು ಕಟ್ಟಿಕೊಡುತ್ತಿದ್ದಾರೆ ಎಂಬ ಅರಿವು ತೇಜಸ್ವಿಯವರ ಸಾಹಿತ್ಯದಲ್ಲಿ ನಾವು ಯೋಚಿಸುವುದಕ್ಕೆ ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅವರು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುತ್ತೂರಿನ ಡಾ.ಶಿವರಾಮ ಕಾರಂತರಿಂದ ಆರಂಭವಾಗಿ ಅನೇಕ ಮಂದಿ ಸಾಹಿತಿಗಳಿದ್ದಾರೆ. ಅದರಲ್ಲಿ ಕುವೆಂಪು ಅವರು ಮತ್ತು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಮಾಡಿದಷ್ಟು ಉತ್ಕೃಷ್ಟವಾದ ಕೊಡುಗೆ ಬೇರೆ ಹೆಚ್ಚಿನವರು ಮಾಡಿದ್ದು ಕಾಣಿಸುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗಕರ್ಮಿ ಐ.ಕೆ. ಬೊಳುವಾರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಾಕ್ಷ ಬಿ ಐತ್ತಪ್ಪ ನಾಯ್ಕ್, ಪದ್ಮಾವತಿ, ಎಸ್ ಆರ್ ನಾಯಕ್ ಪುಷ್ ಗುಚ್ಚ, ಪುಸ್ತಕ ಸ್ಮರಣಿಗೆ ನೀಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರು ಸ್ವಾಗತಿಸಿದರು. ಸಾಹಿತಿ ಶಂಕರಿ ಶರ್ಮ ವಂದಿಸಿದರು. ಡಾ.ಮೈತ್ರಿ ಕಾರ್ಯಕ್ರಮ ನಿರೂಪಿಸಿದರು.