ಬೇಕಾಬಿಟ್ಟಿ ರೇಶನ್ ಕಾರ್ಡ್ ರದ್ದು ಸಲ್ಲದು
Tuesday, October 1, 2024
ಉಡುಪಿ: ಜಿಲ್ಲೆಯಲ್ಲಿ ರೇಶನ್ ಕಾರ್ಡುಗಳನ್ನು ರದ್ದು ಮಾಡಲು ರೇಶನ್ ಅಂಗಡಿಗಳ ಮುಂದೆ ನೋಟಿಸು ಹಾಕಿರುವುದಾಗಿ ಜನರಿಂದ ದೂರು ಬಂದಿದ್ದು, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಕೂಡಲೇ ನಿಜ ಸಂಗತಿಯನ್ನು ಜನರಿಗೆ ವಿವರಿಸಬೇಕೆಂದು ಸಿಪಿಐ (ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬಡ ಮತ್ತು ಕೆಳ ಮಧ್ಯಮ ವರ್ಗದ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದೇ ಆದಲ್ಲಿ ಸಿಪಿಐ (ಎಂ), ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.
1.20 ಲಕ್ಷ ಆದಾಯದ ಅರ್ಹತೆ ತೀರಾ ಹಿಂದೆ ನಿಗದಿಯಾಗಿದ್ದು, ಈಗ ಅದನ್ನು ಹೆಚ್ಚಿಸುವ ಅಗತ್ಯ ಇದೆ. ಕೆಲವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ಆದಾಯ ಹೆಚ್ಚು ತೋರಿಸುತ್ತಾರೆ. ಅದನ್ನು ಬಿಪಿಎಲ್ ಕಾರ್ಡ್ ವಿತರಣೆಗೆ ಪರಿಗಣಿಸಬಾರದು ಎಂದು ಸಿಪಿಐ (ಎಂ) ಒತ್ತಾಯಿಸುತ್ತದೆ. ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಬಾರದು ಎಂದು ಸಿಪಿಐ(ಎಂ) ಜಿಲ್ಲಾ ಕರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.