ಮದ್ಯಪಾನದಿಂದ ಇಡೀ ಸಮಾಜದ ಮೇಲೂ ಪರಿಣಾಮ ಬೀರುತ್ತದೆ: ಶರತ್ ಕೃಷ್ಣ ಪಡುವೆಟ್ನಾಯ
ಉಜಿರೆ: ಮದ್ಯಪಾನ ಸೇವನೆಯ ಪರಿಣಾಮ ಕೇವಲ ವ್ಯಕ್ತಿಯ ಮೇಲೆ ಅಲ್ಲದೆ ಮನೆಯವರಿಗೆ, ಕುಟುಂಬಕ್ಕೆ ಹಾಗೂ ಇಡೀ ಸಮಾಜದ ಮೇಲೂ ಬೀಳುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಅವರು ಅ.4 ರಂದು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇದರ ಸಂಯುಕ್ತ ಮಾರ್ಗದರ್ಶನದಲ್ಲಿ ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ, ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ, ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಉಜಿರೆ, ನವಜೀವನ ಸಮಿತಿಗಳು ಇವರ ಸಹಕಾರದೊಂದಿಗೆ ಬೆಳಾಲು ನವಜೀವನ ಸಮಿತಿ ಸದಸ್ಯರ 25ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬೆಳಾಲು ಶ್ರೀ ಧ.ಮ. ಪ್ರೌಢ ಶಾಲೆಯಲ್ಲಿ ಅ.4ರಿಂದ 11ರ ವರೆಗೆ ನಡೆಯಲಿರುವ 1867ನೇ ಮದ್ಯವರ್ಜನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ರೀತಿಯ ದುಶ್ಚಟಗಳಲ್ಲಿ ಮದ್ಯಪಾನವು ಸಮಾಜವನ್ನು ಗಂಭೀರವಾಗಿ ಕಾಡುವ ದುಶ್ಚಟವಾಗಿದೆ. ಇಂತಹ ಕೆಟ್ಟ ಚಟದಿಂದ ಹೊರಬರಲು ಜನಜಾಗೃತಿ ವೇದಿಕೆಯ ಮೂಲಕ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಬೃಹತ್ ಯೋಜನೆ ರೂಪಿಸಿ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಬಂದು ಕುಡುಕ ಎಂಬ ಹಣೆಪಟ್ಟಿಯಿಂದ ದೂರವಾಗಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಗೌರವಯುತರಾಗಿ ಬಾಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಜತ್ತನ್ನ ಗೌಡ ಮಾತನಾಡಿ, ಜನಜಾಗೃತಿ ವೇದಿಕೆಯ ಮೂಲಕ ಬೆಳಾಲಿನಲ್ಲಿ ಈ ಮೊದಲು ನಡೆದಿದ್ದ ಶಿಬಿರದಲ್ಲಿ ಅನೇಕರು ಶಿಭಿರಾರ್ಥಿಗಳಾಗಿ ಭಾಗವಹಿಸಿ ಕುಡಿತದ ಚಟದಿಂದ ಹೊರ ಬಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿಯ ಶಿಬಿರವೂ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ ಮಾತನಾಡಿ, ಜನಜಾಗೃತಿ ವೇದಿಕೆಯ ಇಂತಹ ಶಿಬಿರಕ್ಕೆ ಸೇರಿದ ಅನೇಕ ಕುಟುಂಬಗಳ ಸದಸ್ಯರು ಕುಡಿತ ಬಿಟ್ಟು ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ ಎಂದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನೋಟರಿ ವಕೀಲ ಶ್ರೀನಿವಾಸ ಗೌಡ ಮಾತನಾಡಿ, ಒಂದು ವಾರದ ಶಿಬಿರದಲ್ಲಿ ಭಾಗವಹಿಸುವವರನ್ನು ಹೀರೋ ಆಗಿ ಪರಿವರ್ತನೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು, ಉಜಿರೆ ವಲಯ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪಜಿರಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ, ಪ್ರಗತಿ ಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ, ಪ್ರಗತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷ ಉಮರ್, ಬೆಳಾಲು ಒಕ್ಕೂಟದ ಅಧ್ಯಕ್ಷರುಗಳಾದ ರತ್ನಾಕರ ಆಚಾರ್ಯ ಬೆಳಾಲು, ಗಂಗಾಧರ ಸಾಲಿಯಾನ್ ಮಾಯಾ, ನೀಲಾವತಿ ಕೊಲ್ಪಾಡಿ ನವಜೀವನ ಸಮಿತಿ ಅಧ್ಯಕ್ಷ ಸೂರಪ್ಪ ಗೌಡ, ಬಿರ್ಮಣ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ, ಉಜಿರೆ ಅಮೃತ್ ಸಿಲ್ಕ್ ಮಾಲಕ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಸ್ವಾಗತಿಸಿದರು. ಗಣೇಶ್ ಆಚಾರ್ಯ ಪ್ರಸ್ತಾವಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರ ಕಾರ್ಯಕ್ರಮ ನಿರೂಪಿಸಿದರು. ಉಜಿರೆ ವಲಯ ಮೇಲ್ವಿಚಾರಕಿ ವನಿತಾ ವಂದಿಸಿದರು.
ಯೋಜನೆಯ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಜನಜಾಗೃತಿ ವೇದಿಕೆ, ನವಜೀವನ ಸಮಿತಿಯ ಪದಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.