
‘ಸಹ್ಯಾದ್ರಿ ಸಂವಾದ’ ಪರಿಸರ ಅರಿವು ಕಾರ್ಯಕ್ರಮ
ಮಂಗಳೂರು: ‘ಸಾರ ಸಂಸ್ಥೆ’ ‘ಪರಿಸರಕ್ಕಾಗಿ ನಾವು’ ವೇದಿಕೆಯ ಸಹಯೋಗದೊಂದಿಗೆ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಹ್ಯಾದ್ರಿ ಸಂವಾದ’ ಪರಿಸರದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಪಶ್ಚಿಮ ಘಟ್ಟದ ಸಂಕೀರ್ಣ ಪರಿಸರದ ಕುರಿತು, ಅಲ್ಲಿನ ಜೀವ ವೈವಿಧ್ಯತೆಯ ಕುರಿತು ಹಾಗೂ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಮೇಲೆ ಮಾನವರಿಂದ ಆಗುತ್ತಿರುವ ಅತಿಕ್ರಮಣ ಹಾಗೂ ಪರಿಸರ ನಾಶದ ಕುರಿತು ವರ್ಣಚಿತ್ರ ಪ್ರದರ್ಶನವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಣಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.
ನಂತರ ನಡೆದ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿ ಸಾರ ಸಂಸ್ಥೆಯ ಸಂಚಾಲಕ ಧನುಷ್ ಕುಮಾರ್ ಮಾತನಾಡಿ, ನಮ್ಮ ಉಳಿವಿಗಾಗಿ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪಶ್ಚಿಮ ಘಟ್ಟದಲ್ಲಿ ಮಾನವನ ಅತಿಕ್ರಮಣ ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳ ಕುರಿತು ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಯವರೊಂದಿಗೆ ಚರ್ಚಿಸಿದರು. ಈ ಮೂಲಕ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ‘ಪರಿಸರಕ್ಕಾಗಿ ನಾವು’ ವೇದಿಕೆಯ ಕಾರ್ಯಕರ್ತರುಗಳಾದ ಸರೋಜ ಪ್ರಕಾಶ್, ಪ್ರಕಾಶ್ ಎನ್., ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ಪದವಿ ವಿಭಾಗದ ಸಂಯೋಜಕಿ ಪ್ರೊ. ವಸಂತಿ ಪಿ., ಐಕ್ಯೂಎಸಿಯ ಸಂಚಾಲಕ ದೇವಿ ಪ್ರಸಾದ್, ವಿಜ್ಞಾನ ಸಂಘದ ಸಂಚಾಲಕ ಡಾ. ರಮಾಕಾಂತ ಪುರಾಣಿಕ ಎಚ್., ಪ್ರಾಣಿಶಾಸ್ತ್ರ ವಿಭಾಗದ ಡಾ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.