
ಪಡಿತರ: ಏಕರೂಪದ ಕಮಿಷನ್ಗೆ ಆಗ್ರಹ
ಮಂಗಳೂರು: ಕೇಂದ್ರ ಸರಕಾರವು ಆಹಾರ ಭದ್ರತಾ ಕಾಯ್ದೆಯಡಿ 84 ಕೋಟಿ ಪಡಿತರ ಚೀಟಿದಾರರಿಗೆ ಉಚಿತವಾದ ಆಹಾರ ಧಾನ್ಯ ನೀಡುತ್ತಿದೆ. ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ನೀಡಲಾಗುವ ಕಮಿಷನ್ ದರವನ್ನು ಏಕರೂಪ ಮಾಡಬೇಕು. ಈ ಮೂಲಕ ನ್ಯಾಯಬೆಲೆ ಅಂಗಡಿ ಮಾಲಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಒತ್ತಾಯಿಸಿದೆ.
ಏಕರೂಪ ಕಮಿಷನ್ ಯೋಜನೆಯನ್ನು ಜಾರಿಗೆ ತಂದು ನ್ಯಾಯಬೆಲೆ ಅಂಗಡಿ ಮಾಲಕರಿಗೆ ಪ್ರತಿ ಕ್ವಿಂಟಾಲ್ಗೆ 250 ರೂ. ಕಮಿಷನ್ ಹಣವನ್ನು ನೀಡಬೇಕು. ಪ್ರಸ್ತುತ ಹಣದುಬ್ಬರದಿಂದ ಸಾರ್ವಜನಿಕರಿಗೆ ದಿನನಿತ್ಯ ಬಳಕೆಯ ವಸ್ತುಗಳನ್ನು ಖರೀದಿಸಲು ತುಂಬಾ ಕಷ್ಟವಾಗುತ್ತಿದೆ. ಕೇಂದ್ರ ಸರಕಾರದ ಯೋಜನೆಗಳಾದ ಭಾರತ್ ರೈಸ್, ಭಾರತ್ ಬೇಳೆ, ಭಾರತ್ ಚನ್ನಾ (ಕಡ್ಲೆಕಾಳು) ಯೋಜನೆಯನ್ನು ಜಾರಿಗೆ ತಂದಿರುವುದು ಸಂತೋಷದ ವಿಚಾರ. ಈ ದಿನನಿತ್ಯದ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಿದರೆ ದರದಲ್ಲಿನ ಏರಿಳಿತವನ್ನು ತಡೆಗಟ್ಟಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ಸುಲಭವಾಗಿ ಸಿಗುವಂತೆ ಮಾಡಿ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಬಹುದು. ಅತೀ ಹೆಚ್ಚು ದರ ಬರುವ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸಬಹುದು. ಕೇಂದ್ರ ಸರಕಾರ ಈ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಚನ್ನಕೇಶವೇಗೌಡ, ಪ್ರಮುಖರಾದ ಭಾಸ್ಕರ್ ಸಾಲ್ಯಾನ್, ದೇವರಾಜು, ಫೈರೋಸ್ ಉಪಸ್ಥಿತರಿದ್ದರು.