ಡಾ. ಮಿರ್ಜಾ ಬಷೀರ್ ಅವರ ‘ಅಬ್ರಕಡಬ್ರ’ ಕೃತಿಗೆ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’

ಡಾ. ಮಿರ್ಜಾ ಬಷೀರ್ ಅವರ ‘ಅಬ್ರಕಡಬ್ರ’ ಕೃತಿಗೆ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’


ಮಂಗಳೂರು: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಕತೆಗಾರ ಡಾ. ಮಿರ್ಜಾ ಬಷೀರ್ ಅವರ ‘ಅಬ್ರಕಡಬ್ರ’ ಕಥಾಸಂಕಲನ ಆಯ್ಕೆಯಾಗಿದೆ.

ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು, ಕೆ.ಪಿ.ಎಸ್.ಸಿ. ಪರೀಕ್ಷೆ ಮೂಲಕ ಸರ್ಕಾರಿ ಸೇವೆಗೆ ಸೇರ್ಪಡೆಯಾಗಿ, ಪಶು ಸಂಗೋಪನಾ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಪಶು ವೈದ್ಯರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿರುವ ಡಾ. ಮಿರ್ಜಾ ಬಷೀರ್ ಮೂಲತಃ ಚಿತ್ರದುರ್ಗದ ಚಳ್ಳಕೆರೆಯವರು.

‘ಬಟ್ಟೆಯಿಲ್ಲದ ಊರಿನಲ್ಲಿ’, ‘ಜಿನ್ನಿ’, ಹಾಗೂ ‘ಹಾರುವ ಹಕ್ಕಿ ಮತ್ತು ಇರುವೆ’ ಡಾ. ಮಿರ್ಜಾ ಬಷೀರ್ ಅವರ ಇತರ ಪ್ರಕಟಿತ ಕಥಾಸಂಕಲನಗಳು. ‘ಗಂಗೆ ಬಾರೆ ಗೌರಿ ಬಾರೆ’ ಇವರ ಪ್ರಕಟಿತ ಪಶುವೈದ್ಯ ವೃತ್ತಿಯ ಅನುಭವ ಕಥನ. ಈವಾಗ ತುಮಕೂರಿನಲ್ಲಿ ವಾಸವಾಗಿರುವ ಡಾ. ಮಿರ್ಜಾ ಬಷೀರ್ ಅವರ ಅನೇಕ ಕಥೆಗಳು ನಾಡಿನ ಹಲವು ದಿನಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ಕಥೆಗಳು ಹಲವು ವಿಶ್ವವಿದ್ಯಾಲಯಗಳ ಪದವಿ ಪಠ್ಯಗಳಲ್ಲಿ ಸೇರ್ಪಡೆಗೊಂಡಿವೆ. ಇವರ ‘ತಬ್ಬಲಿಗಳು’ ನಾಟಕ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿಗೆ ಪಠ್ಯವಾಗಿದೆ. ಡಾ. ಮಿರ್ಜಾ ಬಷೀರ್ ಅವರ ಕಥೆಗಳು ಕೇರಳ ರಾಜ್ಯದ ೯ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಸೇರ್ಪಡೆಗೊಂಡಿದ್ದು, ಕೆಲವು ಕಥೆಗಳು ತೆಲುಗಿಗೆ ಭಾಷಾಂತರವಾಗಿವೆ.

ಡಾ. ಮಿರ್ಜಾ ಬಷೀರ್ ಅವರ ‘ಜಿನ್ನಿ’ ಕಥಾಸಂಕಲನಕ್ಕೆ ಕರ್ನಾಟಕ ಸಂಘ, ಶಿವಮೊಗ್ಗ ಇವರಿಂದ ಲಂಕೇಶ್ ಪ್ರಶಸ್ತಿ ಮತ್ತು ಅನನ್ಯ ಪ್ರಕಾಶನ, ತುಮಕೂರು ಇವರಿಂದ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ, ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನಕ್ಕೆ ಸ್ವಾಭಿಮಾನಿ ಕರ್ನಾಟಕ, ಬೆಂಗಳೂರು ಇವರ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಮತ್ತು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಹಾಗೂ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ‘ಅಮ್ಮ’ ಪ್ರಶಸ್ತಿ ಲಭಿಸಿವೆ. 2024ನೇ ಸಾಲಿನ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಡಾ. ಮಿರ್ಜಾ ಬಷೀರ್ ಅವರನ್ನು ಗೌರವಿಸಲಾಗಿದೆ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 32 ಕೃತಿಗಳು ಬಂದಿದ್ದು, ಹಿರಿಯ ಸಾಹಿತಿ ಡಾ. ಕೆ. ಷರೀಫಾ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಡಾ. ಮುಸ್ತಾಫ ಕೆ.ಹೆಚ್. ಹಾಗೂ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ತುಮಕೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article