
ಉಗ್ಗಬೆಟ್ಟುವಿನಲ್ಲಿ ಬಸ್ ಬೈಕ್ಗೆ ಢಿಕ್ಕಿ: ಸವಾರ ಮೃತ್ಯು
Friday, December 6, 2024
ಬಂಟ್ವಾಳ: ಬಿ.ಸಿ. ರೊಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಬಾಂಬಿಲದಲ್ಲಿ ಬುಧವಾರ ರಸ್ತೆ ಅಪಘಾತ ಸಂಭವಿಸಿ ಅದರ ಕುರುಹು ರಸ್ತೆಯಿಂದ ಮಾಸುವುದಕ್ಕೆ ಮುನ್ನವೇ ಈ ಸ್ಥಳಕ್ಕಿಂತ ಅನತಿ ದೂರದ ವಗ್ಗ ಉಗ್ಗಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕ್ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರ ಪೂಜಾರಿ (45) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರು ಬಿ.ಸಿ. ರೋಡಿನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಎದುರು ದಿಕ್ಕಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಢಿಕ್ಕಿ ಹೊಡೆದಿದೆ.
ಮೃತ ರಾಜೇಂದ್ರ ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ. ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಅಜುಬಾಜು ಇತ್ತೀಚಿಗಿನ ದಿನಗಳಲ್ಲಿ ಅಪಘಾತ ವಲಯವಾಗಿ ಗುರುತಿಸಿದ್ದು, ಈಗಾಗಲೇ ಸಾಕಷ್ಟು ರಸ್ತೆ ಅಪಘಾತ ಸಂಭವಿಸಿ ಸಾವು, ನೋವುಗಳು ಉಂಟಾಗುತ್ತಿದ್ದು,ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.