ಡಿ.21ರಂದು ಸಂವಿಧಾನ ಸನ್ಮಾನ
ಮಂಗಳೂರು: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಮಂಗಳೂರು ವತಿಯಿಂದ ಡಿ.21ರಂದು ಬೆಳಗ್ಗೆ 10.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂವಿಧಾನ ಸನ್ಮಾನ ಅಭಿಯಾನದ ಜಿಲ್ಲಾ ಸಂಚಾಲಕ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಕರಡನ್ನು ಸಂವಿಧಾನ ರಚನಾ ಸಭೆ ಅಧ್ಯಕ್ಷ ಬಾಬು ರಾಜೇಂದ್ರಪ್ರಸಾದ್ ಅವರಿಗೆ ಸಮರ್ಪಣೆ ಮಾಡಿರುವುದು ಹಾಗೂ ಸಂವಿಧಾನದ ಕರಡು ಅಂಗೀಕಾರಗೊಂಡು ಭಾರತ ಸಂವಿಧಾನ ಅಧೀಕೃತವಾಗಿ ಘೋಷಣೆಗೊಂಡು 75 ವರ್ಷ ತುಂಬಿದ ಅಮೃತ ಮಹೋತ್ಸವವನ್ನು ಭಾರತವು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆಯಿಂದ ಡಿ.21ರಂದು ನಗರದ ಪುರಭವನದಲ್ಲಿ ಸಂವಿಧಾನ ಸನ್ಮಾನ ಹಾಗೂ ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕದ ಲೋಕಾರ್ಪಣೆ ನಡೆಯಲಿದೆ. ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಭಾಗ ಮುಖ್ಯಸ್ಥ ಡಾ. ಹೃಷಿಕೇಷ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕುಡುಚಿಯ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪುಸ್ತಕ ಪರಿಚಯ ಮಾಡುವರು. ಪುಸ್ತಕದ ಲೇಖಕ ವಿಕಾಸ್ ಕುಮಾರ್ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂವಿಧಾನ್ ಸಮ್ಮಾನ್ ಸಮಿತಿಯ ವಿಕಾಸ್ ಪುತ್ತೂರು, ಸಹಸಂಚಾಲಕ ವಿನಯ್ ನೇತ್ರ ದಡ್ಡಲಕಾಡು ಉಪಸ್ಥಿತರಿದ್ದರು.