ಕ್ಯಾಂಪ್ಕೊದ ನಿರಂತರ ಪ್ರಯತ್ನದ ಪ್ರತಿಫಲ: ಅಡಿಕೆಯ ಸಮಗ್ರ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ನಿರ್ಧಾರ
ಮಂಗಳೂರು: ಅಡಿಕೆ ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೊದ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ.
ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ, ‘ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ’ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ. ಇದಕ್ಕೆ ಶ್ರಮಿಸಿದ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಸಂಸದರಿಗೆ ಹಾಗೂ ಭಾರತೀಯ ಜೀವನ ಕ್ರಮದಲ್ಲಿ ಅಡಿಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿ ಸಚಿವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಅಡಿಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ, ತಪ್ಪು ಗ್ರಹಿಕೆಯಿಂದ ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೊ ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನವನ್ನು ಮಾಡುತ್ತಲೇ ಬಂದಿದ್ದು, ಕೊನೆಗೂ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ಸನ್ನು ಪಡೆದಿದೆ. ಎಐಐಎಂಎಸ್, ಸಿಎಸ್ಐಆರ್-ಸಿಸಿಎಂಬಿ, ಐಐಎಸ್ಸಿ ಮುಂತಾದ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಕಾರದ ಮೂಲಕ ‘ಅಡಿಕೆ ಮತ್ತು ಮಾನವನ ಆರೋಗ್ಯ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ’ ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಇದರಿಂದ ಅಡಿಕೆಯ ಕುರಿತು ಇರುವ ತಪ್ಪು ಗ್ರಹಿಕೆ ಹೋಗಲಾಡಿಸಿ, ಅದರ ಆರೋಗ್ಯಕರ ಉಪಯೋಗಗಳ ವೈಜ್ಞಾನಿಕ ದಾಖಲೆ ಸಿಗಲು ಸಾಧ್ಯವಾಗಲಿದೆ.
ಕೇಂದ್ರ ಸರಕಾರದ ನಿರ್ಧಾರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಆದಷ್ಟು ಬೇಗ ಸಂಶೋಧನೆ ಪ್ರಾರಂಭಿಸುವಂತೆ ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಸರಕಾರವನ್ನು ಒತ್ತಾಯಿಸಲು ಕ್ಯಾಂಪ್ಕೊ ಎಲ್ಲಾ ಸಂಸದರಲ್ಲಿ ಮನವಿ ಮಾಡಿದೆ.
ಅಡಿಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜೊತೆ ಮಿಶ್ರಣ ಮಾಡಿದ ಉತ್ಪನ್ನಗಳ ಸಂಶೋಧನಾ ವರದಿಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಣ ಮಾಡಿತ್ತು. ಆದರೆ ಕ್ಯಾಂಪ್ಕೊ ಮೊದಲಿನಿಂದಲೂ ಅಡಿಕೆಯ ಮೂಲ ರೂಪದಲ್ಲಿನ ಉಪಯೋಗವನ್ನು ಸಂಶೋಧಿಸಿ ವರ್ಗೀಕರಿಸಬೇಕೆಂದು ಪ್ರತಿಪಾದಿಸುತ್ತಲೇ ಬಂದಿದೆ. ಆ ರೀತಿಯಲ್ಲಿ ಮಾಡಿದ ಪ್ರತೀಯೊಂದು ಸಂಶೋಧನಾ ವರದಿಗಳು ಅಡಿಕೆ ಕ್ಯಾನ್ಸರ್ ರೋಗವನ್ನು ಪ್ರತಿಬಂಧಿಸುವ ಔಷಧೀಯ ಗುಣಗಳ ಬಗ್ಗೆ ಸಾಕ್ಷೀಕರಿಸಿದ ದಾಖಲೆಗಳಿವೆ.
ಕೇಂದ್ರ ಸರಕಾರದ ಅನುಮೋದನೆಯಿಂದ ಲಕ್ಷಾಂತರ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಶ್ರಮಿಸುತ್ತಿರುವ ಕ್ಯಾಂಪ್ಕೊದ ಪ್ರಯತ್ನಕ್ಕೆ ನೈತಿಕ ಬಲ ಸಿಕ್ಕಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ಕೇಂದ್ರ ಕೃಷಿ ಸಚಿವರಿಗೆ ಹಾಗೂ ಎಲ್ಲಾ ಸಂಸದರಿಗೆ ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಕ್ಯಾಂಪ್ಕೊ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದೆ.