ಮೂಡುಬಿದಿರೆಯಲ್ಲಿ ನಾಳೆಯಿಂದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಮೆರುಗು: 30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಶೃಂಗಾರಗೊಂಡಿದೆ ವಿದ್ಯಾಗಿರಿ, ಮೆರುಗು ನೀಡಲಿವೆ ಫಲಷುಷ್ಪ ಪ್ರದರ್ಶನ ತರಕಾರಿ ಕೃಷಿ, 1000 ಕಲಾಕೃತಿಗಳು

ಮೂಡುಬಿದಿರೆಯಲ್ಲಿ ನಾಳೆಯಿಂದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಮೆರುಗು: 30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಶೃಂಗಾರಗೊಂಡಿದೆ ವಿದ್ಯಾಗಿರಿ, ಮೆರುಗು ನೀಡಲಿವೆ ಫಲಷುಷ್ಪ ಪ್ರದರ್ಶನ ತರಕಾರಿ ಕೃಷಿ, 1000 ಕಲಾಕೃತಿಗಳು


ಮೂಡುಬಿದಿರೆ: ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೊಂದಿರುವ ಕಲಾ ರಸಿಕ ಹಾಗೂ ಕಲಾ ಪ್ರೋತ್ಸಾಹಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ನೇತೃತ್ವದಲ್ಲಿ ನಡೆಯುತ್ತಾ ಬಂದಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಮೂವತ್ತರ ಸಂಭ್ರಮದಲ್ಲಿದ್ದು ಇದಕ್ಕಾಗಿ ವಿದ್ಯಾಗಿರಿ ಮತ್ತು  ಪುತ್ತಿಗೆ ವಿವೇಕಾನಂದ ನಗರವು ಸಕಲ ಸಿದ್ಧತೆಯೊಂದಿಗೆ ಸಜ್ಜುಗೊಂಡಿದೆ.

ಕಣ್ಮನ ಸೆಳೆಯುವ ಕಲಾಕೃತಿಗಳು: 

ವಿದ್ಯಾಗಿರಿಗೆ ಪ್ರವೇಶಿಸುತ್ತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿ ವಿವಿಧ ರೀತಿಯ ಗೊಂಬೆಗಳು ನಮ್ಮನ್ನು ಸ್ವಾಗತಿಸುತ್ತಿವೆ. ಮುಂದಕ್ಕೆ ಹೋದಾಗ ಕೃಷಿಸಿರಿ ವೇದಿಕೆಯ ಬಳಿ ೬೦೦ರಕ್ಕಿಂತಲೂ ಹೆಚ್ಚಿನ ಆಹಾರ ಮತ್ತು ಕೃಷಿಮೇಳದ ಸ್ಟಾಲ್‌ಗಳು ಗಮನ ಸೆಳೆಯಲಿವೆ ಮತ್ತು ಅಲ್ಲಿಯೇ ಪಕ್ಕದಲ್ಲಿ ಮುಂಡುರ್ದೆಗುತ್ತು ದಿ.ಅಮರನಾಥ ಶೆಟ್ಟಿ ವೇದಿಕೆಯ ಆವರಣದಲ್ಲಿ ಹೂ ಗಿಡಗಳ ಪ್ರದರ್ಶನದ ಮಧ್ಯೆ ಎತ್ತಿನ ಗಾಡಿ, ಶಿವ, ಬಸವ, ಕರ್ನಾಟಕ ಮಾತೆ, ಪೂಜಾ ಕುಣಿತ, ಹೆಡೆ ಎತ್ತಿದ ಹಾವಿನ ಜತೆ ಗೋವು ಮತ್ತು ಕೃಷ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರೈತ ಮಹಿಳೆ, ಭಾರತೀಯ ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಿದ ಬೊಂಬೆಗಳು, ಪದ್ಮಶ್ರೀ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ, ತುಳಸೀ ಬೊಮ್ಮನ ಗೌಡ ಹಾಗೂ ತಾಯಿ ಮಗುವಿನ ಸಂಬಂಧ ಕಲ್ಪಿಸುವ ಮಹಿಳೆಯ ಕಲಾಕೃತಿಗಳು ಹಾಗೂ ಆಧುನಿಕ ಕಾರ್ಟೂನ್ ಪ್ರತಿಕೃತಿಗಳು  ಗಮನ ಸೆಳೆಯುತ್ತಿವೆ.

ಇದಲ್ಲದೆ ದೇಶದ ಹಲವು ಕಡೆಗಳ ನರ್ಸರಿಗಳಿಂದ ತಂದಿರುವ ವಿವಿಧ ರೀತಿಯ ಆಕರ್ಷಕ ಹೂವಿನ ಗಿಡಗಳು ಮುಖ್ಯದ್ವಾರ ಮತ್ತು ವೇದಿಕೆಯ ಬದಿಗಳಲ್ಲಿ, ರಸ್ತೆಯ ಇಕ್ಕೆಲಗಳನ್ನು ಹಾಗೂ ಬಸವೇಶ್ವರ ವೃತ್ತದ ಸುತ್ತ ಕಣ್ಮ ನ ಸೆಳೆಯುತ್ತಿವೆಯಲ್ಲದೆ ಇದೇ ವೃತ್ತದ ಬಳಿ ಮರ್ಯಾದ ಪುರುಷ ಶ್ರೀರಾಮನ ಪ್ರತಿಕೃತಿಯು ಗಮನಸೆಳೆಯುತ್ತಿದೆ. ಕಾಡು ಪ್ರಾಣಿಗಳು, ಪಕ್ಷಿಗಳು, ಬೆದರು ಗೊಂಬೆಗಳು, ಪುಟಾಣಿ ಗೊಂಬೆಗಳು, ಸಾಹಿತಿಗಳು ಸಹಿತ ಸುಮಾರು ಒಂದು ಸಾವಿರದಷ್ಟು ವಿವಿಧ ಪ್ರತಿಕೃತಿ ಮತ್ತು ಕಲಾಕೃತಿಗಳು ವಿದ್ಯಾಗಿರಿಯ ಆವರಣದಲ್ಲಿ ಕಲಾ ಪ್ರೇಮಿಗಳನ್ನು ಸೆಳೆಯಲು ಸಿದ್ಧಗೊಂಡಿವೆ.

ಕಲಾವಿದ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಮಾರ್ನಾಡು ಮತ್ತು ತಂಡದವರು ಬಣ್ಣದ, ಪ್ಲಾಸ್ಟಿಕ್ ಪೇಪರ್‌ಗಳನ್ನು ಬಳಸಿ ಪಕ್ಷಿಗಳು ಮತ್ತು ಮೀನುಗಳ ಮಾದರಿಯನ್ನು ತಯಾರಿಸಿದ್ದು ಇದು ಯಶೋಕಿರಣ ಬಿಲ್ಡಿಂಗ್‌ನ ಒಳಗಡೆ ಹಾರಾಡಿ ನೋಡುಗರ ಮನ ಸೆಳೆಯಲಿದೆ.

ಈ ಬಾರಿಯ ವಿರಾಸತ್‌ನಲ್ಲಿ ಗಮನ ಸೆಳೆಯಲಿದೆ ಕೈಮಗ್ಗ ಸೀರೆಗಳ ಉತ್ಸವ:

ಭಾರತದ 30 ಪ್ರದೇಶಾವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನ ಮಹಾಮೇಳಗಳಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೇಕಾರರಿಂದ ಗ್ರಾಹಕಕರಿಗೆ ನೇರ ಮರಾಟ ನಡೆಯಲಿದೆ. ಜಿಐ ಟ್ಯಾಗ್ ಹೊಂದಿರುವ ಮತ್ತು ಪ್ರಸಿದ್ಧಿ ಪಡೆದಿರುವ ಕೈಮಗ್ಗದ ಉತ್ಪನ್ನಗಳು ಉಡುಪಿ, ಇಳಕಲ್, ಕೋಲ್ಕತ್ತಾ, ತುಮ್ಮಿನಕಟ್ಟೆ, ವೆಂಕಟಗಿರಿ, ಕಾಶ್ಮೀರಿ, ಕಂಚೀವರಂ, ಮೈಸೂರು, ಕೊಳ್ಳೇಗಾಲ, ದಾವಣೆಗೆರೆ, ಚೆಟ್ಟಿನಾಡ್, ಕೇರಳ, ಹೈದ್ರಾಬಾದ್, ಮದ್ರಾಸ್‌ನ ಸೀರೆಗಳು ಮತ್ತು ಬಟ್ಟೆಗಳು ಮಾರಾಟಕ್ಕಿವೆ. ಈ ಉತ್ಸವವು ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ನೆರವೇರುತ್ತಿದೆ.

ಇಂಡಿಯನ್ ಆರ್ಟಿಸಾನ್ ಬಝಾರ್:

ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಝಾರ್ ಈ ಬಾರಿಯ ವಿರಾಸತ್‌ನಲ್ಲಿ ನಡೆಯಲಿದೆ. ಭಾರತದಾದ್ಯಂತ ತಯಾರಾದ ವೈವಿಧ್ಯಮಯ ಕರಕುಶಲ ವಸ್ತುಗಳು, ಆಯಾರಾಜ್ಯಗಳ ಕರಕುಶಲ ಕರ್ಮಿಗಳಿಂದ ನೇರ ಮಾರಾಟ ನಡೆಯಲಿದೆ. ಬೆಂಗಳೂರು ಆರ್ಟ್ಸ ಮತ್ತು ಕ್ರಾಫ್ಟ್ ಮೇಳ ಹಾಗೂ ದೆಹಲಿಯ ಮೀನಾ ಬಝಾರ್ ಮೇಳಗಳಂತೆ ಈ ಮೇಳ ನಡೆಯಲಿದ್ದು ಇವುಗಳು ಸಿದ್ಧಗೊಂಡಿವೆ.

ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ ‘ರೈತರ ಸಂತೆ’. ಈ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಮೊದಲು ಬಂದವರಿಗೆ ಮೊದಲ ಆದ್ಯತೆ. ರೈತರೇ ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣು ಪುಷ್ಪಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ಒಟ್ಟಾರೆ ಈ ಮಹಾಮೇಳದಲ್ಲಿ 500 ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಸ್ರೇಲ್ ತಂತ್ರಜ್ಞಾನ ಬಳಸಿ ಬೆಳೆದ ತರಕಾರಿ, ಹಣ್ಣು-ಹಂಪಲು, ಹೂವು-ಅಲಂಕಾರಿಕ ಗಿಡಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ. 

ಆಹಾರ ಮೇಳ:

ಈ ಬಾರಿಯ ಆಳ್ವಾಸ್ ವಿರಾಸತ್‌ನಲ್ಲಿ ಆಹಾರ ಮೇಳದಲ್ಲಿ ಹೊಟ್ಟೆಗೆ ಹಿಟ್ಟು ಮಾತ್ರವಲ್ಲ, ಕಣ್ಣಿಗೆ ಸೌಂದರ್ಯ, ನಾಸಿಕಕ್ಕೆ ಕಂಪು, ಬಾಯಲ್ಲಿ ನೀರೂರಿಸುವ ರುಚಿಗಳಿವೆ. ತುಳುನಾಡಿನ ಪರಂಪರೆಯಿಂದ ಹಿಡಿದು, ಅಪ್ಪಟ ದೇಸೀಯ ತಿನಿಸು, ಇಂದಿನ ಫಾಸ್ಟ್ಫುಡ್ ವರೆಗಿನ ಆಹಾರ ವೈವಿಧ್ಯಗಳು ಲಭ್ಯ. ನಾಲಗೆಯಲ್ಲಿ ಖಾರ, ಹುಳಿ, ಉಪ್ಪು, ಸಿಹಿಗಳ ಸಂಗಮ. ವಿಭಿನ್ನ ಆಹಾರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.

ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ:

ಅಂತಹ ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್‌ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.

ಫಲಪುಷ್ಪ ಮೇಳ:

ಫಲ ಹಾಗೂ ಪುಷ್ಪವು ನಮ್ಮ ಸಂಸ್ಕೃತಿಯಲ್ಲಿ ಆತಿಥ್ಯ ಹಾಗೂ ಗೌರವದ ದ್ಯೋತಕ. ಆದರೆ, ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೂ, ತರಕಾರಿ, ಹಣ್ಣು ಹಂಪಲುಗಳ ಕೃಷಿ ಕೊಂಚ ವಿರಳವಾಗಿದೆ. ಅದಕ್ಕಾಗಿ ತರಹೇವಾರಿ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ-ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ.

ಲಲಿತಾಕಲಾ ಮೇಳ:

ವಿರಾಸತ್‌ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಬಣ್ಣ-ಕುಂಚದ ಮೂಲಕ ರಂಗು ಮೂಡಿಸುವ, ಬಣ್ಣದಾಟದಲ್ಲೇ ಸಂದೇಶ ರವಾನಿಸುವ ಕಲಾವಿದರ ಕೌಶಲ ಹಾಗೂ ಸೃಜನಶೀಲತೆಯೇ ಈ ಕಲಾಕೃತಿಗಳು. ದೇಶ-ವಿದೇಶ ವಿಖ್ಯಾತ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಛಾಯಾಚಿತ್ರಗಳ ಪ್ರದರ್ಶನ:

ಒಂದು ಛಾಯಾಚಿತ್ರ ಸಾವಿರ ಶಬ್ದಗಳಿವೆ ಸಮ ಎಂಬುದು ಉಕ್ತಿ. ಸೃಜನಶೀಲತೆಯಿಂದ ಸೆರೆ ಹಿಡಿದ ಬಣ್ಣ-ಬೆಳಕು-ನೆರಳಿನ ಚಿತ್ತಾರವು ನೈಜತೆಗೂ ಸಾಕ್ಷಿ. ಅಂತಹ ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳು, ಬುಡಕಟ್ಟು ಸಮುದಾಯಗಳನ್ನು ಪ್ರತಿಬಿಭಿಸುವ 600ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದ್ದು ಇದಕ್ಕೆಲ್ಲಾ ಸಿದ್ಧಗೊಂಡಿದೆ. ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದುಕೊಳ್ಳಲಿದ್ದು ಪರಿಪೂರ್ಣವಾಗಿ ಸಿದ್ಧಗೊಂಡಿವೆ.

ಸಭಾ ಕಾರ್ಯಕ್ರಮ:

ಈ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಜೊತೆಗೆ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು ಇಲ್ಲೂ ವೇದಿಕೆ ಸಿದ್ದಗೊಂಡಿದ್ದು ಸಂಜೆ  5.30ರಿಂದ 6.30ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. 

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಬಿಎಲ್ ಶಂಕರ್ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಎಂ.ಜಿ.ಆರ್. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಮುಂಬಯಿ ಹೇರಂಭಾ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಕಾಯರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಬೆಂಗಳೂರು ಕೆ.ಎನಲ್.ಎನ್. ಎಂಜಿನಿಯರಿಂಗ್ ಆಡಳಿತ ನಿರ್ದೇಶಕ ಪ್ರಸನ್ನ ಕುಮಾರ್ ಶೆಟ್ಟಿ, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ್ನ ಎಂ.ರವೀಂದ್ರನಾಥ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಜಯಶ್ರೀ ಅಮರನಾಥ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್‌ನ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ಮೂಡುಬಿದಿರೆ ಬಿಮಲ್ ಕನ್‌ಸ್ಟ್ರಕ್ಷನ್‌ನ ಪ್ರವೀಣ್ ಕುಮಾರ್ ಉಪಸ್ಥಿತರಿರುವರು.

ಭವ್ಯ ಸಾಂಸ್ಕೃತಿಕ ಮೆರವಣಿಗೆ:

ಸಂಜೆ ೬.೩೫ರಿಂದ ರಾತ್ರಿ 8.30ರ ವರೆಗೆ ನಡೆಯಲಿದ್ದು, 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 3000ಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

ರಥಾರತಿ: ರಾತ್ರಿ 8.30ರಿಂದ 9.30ರ ವರೆಗೆ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ, ಸರಸ್ವತಿ, ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article