
ಬುದ್ಧಿಕೋಶವನ್ನು ಬಲಪಡಿಸುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ನಾಗವೇಣಿಮಂಚಿ
ಬಂಟ್ವಾಳ: ಬುದ್ಧಿಕೋಶವನ್ನು ಬಲಪಡಿಸುವ ಶಕ್ತಿ ಸಾಹಿತ್ಯಕ್ಕಿದೆ ಅಂತಹ ಕೆಲಸಗಳು ಶಾಲೆಗಳಿಂದಲೇ ಆಗಬೇಕಿದೆ ಎಂದು ಸಾಹಿತಿ, ಕನ್ನಡ ಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ ಹೇಳಿದರು.
ದ.ಕ. ಜಿಲ್ಲಾ ಕಸಾಪ ಬಂಟ್ವಾಳತಾಲೂಕು ಘಟಕದ ಆಶ್ರಯದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ (ರಿ)ದ ಸಹಯೋಗದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆಯ ಬಿ.ವಿ.ಕಾರಂತ್ ಸಭಾಂಗಣ, ದಿವಂಗತಕನ್ನಡ ಪಂಡಿತ್ ಎ.ಪಿ. ತಿಮ್ಮಯನ್ ವೇದಿಕೆಯಲ್ಲಿ ಶನಿವಾರ ಸಂಜೆ ಎರಡುದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕಿನ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಪ್ರಜ್ವಲನಗೈಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪಂಡಿತ್ ದಿ. ಎ.ಪಿ. ತಿಮ್ಮಯ್ಯನ್, ಪಂಪನಿಂದ ಹಿಡಿದು ಮುದ್ದಣ್ಣ ನವರೆಗೂ ಅವರು ಹೇಳಿದ ಪಾಠಗಳು ಆತ್ಮಶಕ್ತಿಯನ್ನು ತುಂಬಿಕೊಟ್ಟಿದೆ ಎಂದ ಅವರು ತ್ರಿಕರಣ ಶುದ್ಧಿಯನ್ನು ಈ ಶಾಲೆ ಕಲಿಸಿಕೊಟ್ಟಿದೆ. ಸಾಮೂಹಿಕ ಸಾಮರಸ್ಯ ಸಹಿತ ಸಮುದಾಯದ ಹಿತ ಕಾಯುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಇಲ್ಲಿನ ಶಿಕ್ಷಣ, ಬಾಲ್ಯದ ಕಥೆಗಳನ್ನು ಸ್ಮರಿಸಿಕೊಂಡ ಡಾ. ನಾಗವೇಣಿ ಮಂಚಿಯವರು ನೂಜಿಬೈಲು ಶಾಲೆಯಲ್ಲಿ ಶಿವಣ್ಣ ಮೇಸ್ಟ್ರು ಹೇಳಿಕೊಟ್ಟ ಪಾಠಗಳನ್ನು ಈ ಸಂದರ್ಭ ಸ್ಮರಿಸಿಕೊಂಡರಲ್ಲದೆ ಕಾಲ ಬದಲಾದಂತೆ ಸಾಹಿತ್ಯ, ಜೀವನ ಮೌಲ್ಯಗಳೇ ಬದಲಾಗುತ್ತಿದೆ. ಸಮಾಜದ ಆರೋಗ್ಯ ಪೂರ್ಣ ಬದುಕನ್ನು ಪೋಷಿಸುವ ಬರಹವೇ ನಿಜವಾದ ಮಾನವೀಯತೆ, ಪ್ರೀತಿ ಕೊಡುವುದೇ ನಿಜವಾದ ಸಾಹಿತ್ಯ ಎಂದರು.
ಆಶಯ ನುಡಿಗಳನ್ನಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು, ಬಂಟ್ವಾಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಹೆಚ್ಚು ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರ್ ಆಳ್ವರು ಮಾತನಾಡಿ, ಮಂಚಿ ಮಾತ್ರವಲ್ಲದೆ ಆಸುಪಾಸಿನ ಎಲ್ಲಾ ಗ್ರಾಮಗಳ ಸಾಹಿತ್ಯಾಸಕ್ತರ ನೆರವಿನೊಂದಿಗೆ ಸಮ್ಮೇಳನಆಯೋಜಿಸಲಾಗಿದೆ ಎಂದರು.
ಇದೇ ವೇಳೆ ನೂತನ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸಮ್ಮೇಳನಾಧ್ಯಕ್ಷಮುಳಿಯ ಶಂಕರ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಗಟ್ಟಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪೂನಾದ ಡಿ.ವೈ. ಪಾಟೀಲ್ ಅಂತರ್ರಾಷ್ಟ್ರೀಯ ವಿ.ವಿ.ಯ ಕುಲ ಸಚಿವರಾದ ಡಾ. ಬೀರಾನ್ ಮೊಯ್ದಿನ್ ಪಾಟೀಲ್, ಅಮ್ಟೂರು ಲಯನ್ಸ್ ಕಲ್ಬ್ ಸ್ಥಾಪಕಾಧ್ಯಕ್ಷ ನೋಯಲ್ ಲೋಬೋ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ಮೂಲ್ಕಿಘಟಕದ ಅಧ್ಯಕ್ಷ ಮಿಥುನ್ ಉಡುಪ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಮಂಚಿ, ಬಂಟ್ವಾಳ ಕಸಾಪ ಪದಾಧಿಕಾರಿಗಳಾದ ರಮಾನಂದ ನೂಜಿಪ್ಪಾಡಿ, ಡಿ.ಬಿ. ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.