
ಕೋಟಿ-ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಕದ್ರಿ ಜಿಂಕೆ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗುತ್ತಿದೆ...!
ಮಂಗಳೂರು: ಕದ್ರಿ ಪಾರ್ಕ್ ಬಳಿಯ ಜಿಂಕೆ ವನವನ್ನು ಕದ್ರಿ ಪಾರ್ಕ್ಗೆ ಪರ್ಯಾವಾಗಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕಾ ಇಲಾಖೆ, ಮುಡಾ, ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಯಾಗಿ ಹಲವು ವರ್ಷಗಳು ಕಳೆದಿದ್ದು, ಇದೀಗ ಈ ಪಾರ್ಕ್ಗೆಎ ಸೂಕ್ತ: ನಿರ್ವಹಣೆಯ ಕೊರತೆ ಎದುರಾಗಿದೆ.
ಅದರಲ್ಲಿನ ನೀರು ಕಲುಷಿತಗೊಂಡಿದೆ. ಕೆಲವು ಕಲ್ಲು ಬೆಂಚುಗಳಲ್ಲಿ ಕುಳಿತು ಕೊಳ್ಳಲು ಜನರಿಗೆ ಸಾಧ್ಯವಿಲ್ಲ. ಕುಳಿತುಕೊಳ್ಳಲು ಯೋಗ್ಯವಿಲ್ಲ. ಮಳೆಗಾಲದಲ್ಲಿ ಹಿಡಿದ ಪಾಚಿ ಹಾಗೇ ಒಣಗಿ ಹೋಗಿದ್ದು, ಬಣ್ಣ ಬಳಿದು ಕುಳಿತುಕೊಳ್ಳಲು ಯೋಗ್ಯವಾಗುವಂತೆ ಮಾಡಬೇಕಿದೆ. ಪಾರ್ಕ್ನ ಆವರಣದ ಗೋಡೆ ಬದಿಯಲ್ಲಿ ಪೊದೆಗಳ ರೀತಿಯಲ್ಲಿ ಗಿಡಗಳು ಬೆಳೆದಿದ್ದು, ತರಗೆಲೆಗಳ ನಡುವೆ ನೀರು. ತುಂಪು ಪಾನೀಯಗಳನ್ನು ಕುಡಿದು ಎಸೆದ ಬಾಟಲಿಗಳು ಕೂಡಾ ಬಿದ್ದಿವೆ. ಕೆಲವು ಕಡೆಗಳಲ್ಲಿ ಹುತ್ತಗಳೂ ಬೆಳೆದಿವೆ.
ಜಿಂಕೆವನ ಪಾರ್ಕ್ ಪ್ರದೇಶ 1.75 ಎಕರೆ ವಿಸ್ತೀರ್ಣ ಹೊಂದಿದ್ದು, ಮೊದಲೇ ಸ್ಥಳದಲ್ಲಿದ್ದ ದೊಡ್ಡ ಮರಗಳನ್ನು ಹಾಗೇ ಉಳಿಸಿಕೊಂಡು, ಅವುಗಳ ನಡುವೆ ಹೂವಿನ ಗಿಡಗಳನ್ನು ಬೆಳೆಸಿ, ಕಾಲು ಹಾದಿ, ಕುಳಿತುಕೊಳ್ಳಲು ಬೆಂಚು, ಗ್ಯಾಲರಿ ಇತ್ಯಾದಿಗಳನ್ನು ಅಳವಡಿಸಲಾಗಿತ್ತು. ಜಿಂಕೆವನಕ್ಕೆ ಪ್ರವೇಶ ಶುಲ್ಕ ಇರುವುದರಿಂದ ಕದ್ರಿಯ ಮುಖ್ಯ ಪಾರ್ಕ್ಗೆ ಹೋಲಿಸಿದರೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಿದೆ. ಫೋಟೋ ಶೂಟ್-ವೀಡಿಯೋ ಶೂಟಿಂಗ್ಗಳಿಗೆ ದುಬಾರಿ ಶುಲ್ಕವೂ ಇದೆ. ಈ ಕಾರಣಕ್ಕಾಗಿ ಬಹುತೇಕ ಮಂದಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಪಡಿಸಲಾದ ರಸ್ತೆಯ ಇಕ್ಕೆಲಗಳಲ್ಲಿಯೇ ಫೋಟೋ ಶೂಟ್ಗಳನ್ನು ಮಾಡುತ್ತಾರೆ.
2.30 ಕೋ.ರೂ. ವೆಚ್ಚದಲ್ಲಿ ಪಾರ್ಕ್ನಲ್ಲಿ ಅಳವಡಿಸಲಾಗಿರುವ ಸಂಗೀತ ಕಾರಂಜಿ ತನ್ನ ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿದೆ. ಸಂಗೀತ ಕಾರಂಜಿಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದು, ಕಾರಂಜಿಗಾಗಿ ಅಳವಡಿಸಿದ ಉಪಕರಣ ಮಳೆ ಬಿಸಿಲಿಗೆ ತುಕ್ಕು ಹಿಡಿಯುತ್ತಿದೆ. ಇವುಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ವ್ಯರ್ಥವಾದಂತಾಗಿದೆ.
ಪಾರ್ಕ್ ಒಳಗೆ ರೇಡಿಯೋ ಸ್ಟೇಷನ್ ಒಂದಿದೆ. ಆದರೆ ಅದರೊಳಗೆ ರೇಡಿಯೋ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳು ಇಲ್ಲ. ಯಾರೋ ಅದನ್ನು ಕೋಣೆಯಾಗಿ ಉಪಯೋಗಿಸುತ್ತಿದ್ದು, ಆಹಾರ ಸೇವನೆ ಮಾಡಿರುವುದು, ಬಾಟಲುಗಳನ್ನು ಇಟ್ಟಿರುವುದು ಕಂಡು ಬರುತ್ತದೆ. ಹೊರಗಡೆಯಿಂದ ರೇಡಿಯೋ ಸ್ಟೇಶನ್ ಎಂದು ಬರೆಯಲಾಗಿದ್ದು, ಇದನ್ನು ಅಭಿವೃದ್ಧಿ ಪಡಿಸಿ, ರೇಡಿಯೋ ಪ್ರಸಾರವನ್ನು ಮಾಡಬೇಕು ಎನ್ನುವ ಅಗ್ರಹ ಪಾರ್ಕ್ ಬಳಕೆದಾರರದ್ದಾಗಿದೆ.
ಪಾರ್ಕ್ನಲ್ಲಿ ಗಿಡಮರಗಳಿದ್ದು, ತಂಪಾದ ವಾತಾವರಣವೂ ಇದೆ. ಆದರೆ ಸುತ್ತಲಿನ ಪ್ರದೇಶವನ್ನು ನಿರ್ವಹಣೆಯಾಗುತ್ತಿಲ್ಲ. ಗ್ಯಾಲರಿಗಳು ಕುಳಿತು ಕೊಳ್ಳಲು ಯೋಗ್ಯವಾಗಿಲ್ಲ. ಕನಿಷ್ಠ 2 ವರ್ಷಕ್ಕೊಮ್ಮೆಯಾದರೂ, ಸುಣ್ಣ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಬೇಕು ಎನ್ನುತ್ತಾರೆ ಬಳಕೆದಾರರು.