ಕಾಡುವ ಸಂವೇದನೆ ಕವಿ ಮನಸ್ಸಿಗೆ ಮೂಲ: ಡಾ. ಕೈರೋಡಿ

ಕಾಡುವ ಸಂವೇದನೆ ಕವಿ ಮನಸ್ಸಿಗೆ ಮೂಲ: ಡಾ. ಕೈರೋಡಿ


ಮೂಡುಬಿದಿರೆ: ಹೊರಗಿನ ಪ್ರಪಂಚವನ್ನು ತೆರೆದ ಕಣ್ಣುಗಳಿಂದ ಕಂಡಾಗ ಅನೇಕ ಸಂಗತಿಗಳು ನಮ್ಮ ಮನಸ್ಸನ್ನು ತಟ್ಟಿ ಯೋಚನೆಗೀಡು ಮಾಡಿದಾಗ ಅಂತಹ ಸಂಗತಿಗಳೇ ನಮ್ಮನ್ನು ಕವಿತ್ವದೆಡೆಗೆ ಸೆಳೆಯುತ್ತವೆ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನುಡಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀ ಮಹಾವೀರ ಪ.ಪೂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಕಾವ್ಯ ಮತ್ತು ಜೀವನಪ್ರೀತಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಭಾವನಾತ್ಮಕ ಸಂಗತಿಗಳಿರಬಹುದು, ನೋವಿನ ಘಟನೆಗಳೇ ಇರಬಹುದು, ಸಂತೋಷದ ಕ್ಷಣಗಳೇ ಇರಬಹುದು ಆ ಸಂದರ್ಭಗಳಲ್ಲಿ ನಮ್ಮನ್ನು ಕಾಡುವ ಸಂವೇದನೆ, ಜೀವನಪ್ರೀತಿ ಕವಿಮನಸ್ಸಿಗೆ ಮೂಲ. ಒಳ್ಳೆಯ ಬರಹವೂ ಕಾವ್ಯವಾಗಬಲ್ಲುದು ಮತ್ತು ಕಾವ್ಯ ರಚಿಸದಿದ್ದರೂ ಜೀವನ ಪ್ರೀತಿಯ ಸಂವೇದನೆ ಇರುವವರೆಲ್ಲರೂ ಕವಿಗಳೇ ಆಗಿರುತ್ತಾರೆ ಎಂದರು. 

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಕೆ. ವೇಣುಗೋಪಾಲ ಶೆಟ್ಟಿ ಅವರು ಮಾತನಾಡಿ, ಇಂದಿನ ಯುವಜನತೆಯಲ್ಲಿ ಭಾವನಾತ್ಮಕ ಸಂಬಂಧಗಳು ಸಡಿಲಗೊಳ್ಳುತ್ತಿದ್ದು ಹೆತ್ತವರು ಅನಾಥರಾಗುವಂತಹ ಮತ್ತು ವೃದ್ಧಾಶ್ರಮಗಳಲ್ಲಿ ದಿನಕಳೆಯುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗದಂತೆ ಮಕ್ಕಳಲ್ಲಿ ಮಾನವೀಯತೆಯ ಸಂಸ್ಕಾರವನ್ನು ಬೆಳೆಸುವಲ್ಲಿ ಸಾಹಿತ್ಯ ಪ್ರೀತಿ ನೆರವಾಗುತ್ತದೆ ಎಂದರು.

ಶ್ರೀ ಮಹಾವೀರ  ಪದವಿ ಕಾಲೇಜಿನ ಪ್ರಾಂಶುಪಾಲ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ರಾಧಾಕೃಷ್ಣ ಶೆಟ್ಟಿ, ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು.  

ಅಮೂಲ್ಯ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮಹಾವೀರ  ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ವಿಜಯಲಕ್ಷ್ಮೀ ಮಾರ್ಲ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article