
ವಿದ್ಯಾರ್ಥಿಗಳನ್ನು ಸವ್ಯಾಸಾಚಿಯನ್ನಾಗಿಸುವ ಶಿಕ್ಷಣ ಅಗತ್ಯ: ಡಾ. ನಾ. ಸೋಮೇಶ್ವರ
ಮೂಡುಬಿದಿರೆ: ಹಣ ಸಂಪಾದಿಸುವುದು, ಪದವಿ ಪಡೆದುಕೊಳ್ಳುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ. ವಿದ್ಯಾ ಥಿ೯ಗಳನ್ನು ಸವ್ಯಸಾಚಿಯನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶ ಎಂದು ಕ್ವಿಜ್ ಮಾಸ್ಟರ್, ಲೇಖಕ ಡಾ. ನಾ. ಸೋಮೇಶ್ವರ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಮೂಡುಬಿದಿರೆಯ ಸೌಟ್ಸ್-ಗೈಡ್ಸ್ ಕನ್ನಡ ಭವನದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇನ್ನೊಬ್ಬರ ಕುಶಲ ಕ್ಷೇಮ ವಿಚಾರಿಸುವುದು ಭಾರತೀಯ ಸಂಸ್ಕೃತಿ. ಪೋಷಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಇಂತಹ ಮೂಲಭೂತ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ಪೋಷಕರ ಕರ್ತವ್ಯ ಮಾತ್ರವಲ್ಲ ಧರ್ಮವೂ ಆಗಿದೆ ಎಂದರು.
ನಮ್ಮ ಮೆದುಳಿನ ರಚನೆಯಲ್ಲಿ ಅರೆಗೋಳ ಎಂಬ ಭಾಗವಿದೆ. ಎಡ ಅರೆಗೋಳವು ಸದಾ ಲೆಕ್ಕಾಚಾರಗಳಂತಹ ತಾರ್ಕೀಯ ವಿಚಾರಗಳ ಬಗ್ಗೆ ಯೋಚಿಸುತ್ತದೆ. ಅದು ಯಾವುದೇ ಭಾವನೆ, ಮಾತಿನ ವೈಖರಿಗೆ ಬಲಿಯಾಗುವುದಿಲ್ಲ. ಬಲ ಅರೆಗೋಳ ಭಾವನೆಗಳಿಗೆ ಆದ್ಯತೆ ನೀಡುತ್ತದೆ ಎಂದರು.
ಇವತ್ತಿನ ಶಿಕ್ಷಣ ವ್ಯವಸ್ಥೆ ಕೇವಲ ಎಡ ಅರೆಗೋಳಕ್ಕೆ ಆದ್ಯತೆ ನೀಡುತ್ತಿದೆ. ಭಾವನೆಗಳನ್ನು ವ್ಯಕ್ತಪಡಿಸುವ ಬಲ ಅರೆಗೋಳಕ್ಕೂ ಆದ್ಯತೆ ನೀಡಬೇಕು ಎಂದ ಅವರು ಆಳ್ವಾಸ್ ಸಂಸ್ಥೆಯು ವಿದ್ಯಾರ್ಥಿ ಗಳ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಜೀವನಕ್ಕೆ ಹಣ ಬೇಕು ಆದರೆ ಹಣ ಸುಖವನ್ನು ನೀಡುವುದಿಲ್ಲ. ಸುಖವನ್ನು ನೀಡುವುದು ಲಲಿತಕಲೆಗಳು ಮಾತ್ರ. ಅದಕ್ಕಾಗಿ ಎಡ ಅರೆಗೋಳ ಜೊತೆಗೆ ಬಲ ಅರೆಗೋಳದ ಯೋಚನೆಗಳೂ ಅಗತ್ಯ. ಕಲೆ, ಸಾಹಿತ್ಯ, ಸಂಸ್ಕೃತಿಯೊಂದಿಗೆ ಭಾವನೆಗಳಿಗೂ ಮನ್ನಣೆ ನೀಡುವುದು ಮುಖ್ಯ ಎಂದು ಸಲಹೆ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲೆ ಪಿ.ಎನ್. ಜಾನ್ಸಿ ಮಾತನಾಡಿ, ನಮ್ಮ ಸ್ವಾರ್ಥಗಳನ್ನು ಬದಿಗಿಟ್ಟು ನಮ್ಮ ತಂದೆ ತಾಯಿ ನಮಗೆ ನೀಡಿದ ಕೊಡುಗೆಯನ್ನು ನೆನಪು ಮಾಡಿಕೊಳ್ಳಬೇಕು. ತಲೆಮಾರು ಎಷ್ಟೇ ಬದಲಾದರು ಇಂತಹ ಗುಣಗಳನ್ನು ಮರೆಯಬಾರದು. ಸಮಾಜ ನಮಗೆ ಏನು ಕೊಟ್ಟಿದೆ. ನಾವು ಏನನ್ನು ಕಲಿತಿದ್ದೇವೆ ಎಂದು ಯೋಚಿಸಿ ಎಂದರು.
ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಮಾತನಾಡಿ, ವಿದ್ಯೆಯಿಂದ ಏನನ್ನು ಕಲಿಯಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡರೆ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು. ನಾವು ವಿದ್ಯಾವಂತರಾಗಿ ನಮ್ಮ ತಂದೆ ತಾಯಿಯನ್ನು ನೋಡಿಕೊಳ್ಳದಿದ್ದರೆ ಆ ವಿದ್ಯೆಗೆ ಏನು ಬೆಲೆ ಎಂಬುದನ್ನು ಯೋಚಿಸಬೇಕು.
ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳ ಸಾಮರ್ಥ್ಯ ಏನು ಎಂಬುದು ಅವರ ಅರಿವಿಗೆ ಬರಬೇಕು, ಅವರಿಗೆ ವೇದಿಕೆ ಸಿಗಬೇಕು ಎನ್ನುವುದು.
ಡಾ. ನಾ. ಸೋಮೇಶ್ವರ ಅವರನ್ನು sಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಉನ್ನತ ಸಾಧನೆ ಮೆರೆದ ೨೫೪ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಣೂಳ್ಕರ್ ಸ್ವಾಗತಿಸಿದರು. ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸುನಿಲ್ ವಂದಿಸಿದರು.