
ಸುಬ್ರಹ್ಮಣ್ಯದಲ್ಲಿ ಕಸ್ತೂರಿರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ
ಸುಬ್ರಹ್ಮಣ್ಯ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸುಬ್ರಹ್ಮಣ್ಯದ ವಲಯ ಅರಣ್ಯ ಕಚೇರಿಯ ಎದುರುಗಡೆ ಕಸ್ತೂರಿರಂಗನ್ ವರದಿ ಬಾದಿತ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ರೈತರಿಂದ ಬೃಹತ್ ಪ್ರತಿಭಟನೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು, ಪರಿಭಾವಿತ ಅರಣ್ಯ ದಡಿಯಲ್ಲಿ ಸೇರಿಸಿರುವ ಸರ್ವೆ ನಂಬರಿನಲ್ಲಿರುವ ಸಾರ್ವಜನಿಕ ಕಟ್ಟಡಗಳು ಹಾಗೂ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಬಿಟ್ಟುಕೊಡಬೇಕು. ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶದಲ್ಲಿ ಇರುವ ಅರಣ್ಯ ದಂಚಿನಲ್ಲಿ ಕೂಡಲೇ ಗಡಿ ಗುರುತು ಮಾಡಬೇಕು, ಅಲ್ಲದೆ ಆನೆ ದಾಳಿ ಆಗದಂತೆ ಸೋಲಾರ್ ಬೇಲಿಯನ್ನ ಅಳವಡಿಸಬೇಕು. ಕಸ್ತೂರಿ ರಂಗನ್ ವರದಿ ಆಸ್ವಾಭಾವವಿಕವಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಬಾರದೆ ಸರ್ವೆ ಮಾಡಿರುವುದನ್ನು ನಾವುಗಳು ವಿರೋಧಿಸುತ್ತೇವೆ. ಈಗಾಗಲೇ ಅಕ್ರಮ ಸಕ್ರಮದಡಿಯಲ್ಲಿ ಅರಣ್ಯದಂಚಿ ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು ಅದನ್ನು ಅನೋರ್ಜಿತಗೊಳಿಸುವ ಬಗ್ಗೆ ಕೂಡ ಅರಣ್ಯ ಇಲಾಖೆ ಹೊರಟಿರುವುದು ಖಂಡನೀಯ. ಆದುದರಿಂದ ಈ ಎಲ್ಲ ಸಮಸ್ಯೆಗಳಿಗೆ ಅರಣ್ಯ ಇಲಾಖೆ, ಸರ್ವೆ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಕೂಡಲೇ ಜಂಟಿ ಸರ್ವೆಯನ್ನು ಮಾಡಿ ರೈತರಿಗೆ ನ್ಯಾಯವನ್ನು ಒದಗಿಸಬೇಕಾಗಿ ಒತ್ತಾಯಿಸುತಿದ್ದೇವೆ ಎಂದು ನುಡಿದರು.
ಕಡಬ ತಾಲೂಕು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ ಕಸ್ತೂರಿರಂಗನ್ ವರದಿಯನ್ನು ಕರಾವಳಿ ಭಾಗದ ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸುತ್ತಿದ್ದೇವೆ ಎಂದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಮೂಲೆ ಮಜಲು ಮಾತನಾಡಿ ಕಸ್ತೂರಿರಂಗನ್ ವರದಿ ಬಾದಿತ ಗ್ರಾಮಗಳ ರೈತರಿಗೆ ನ್ಯಾಯವನ್ನು ಒದಗಿಸಲು ಕೂಡಲೇ ಜಂಟಿ ಸರ್ವೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಚಂದ್ರಶೇಖರ ಬಾಳುಗೋಡು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅತ್ಯುತ್ತ ಗೌಡ ನಿರೂಪಿಸಿ, ಹರಿಪ್ರಸಾದ್ ಕಳಿಗೆ ವಂದಿಸಿದರು.