
ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ: ಅಪರಾಧಿಗೆ ಘೋರ ಶಿಕ್ಷೆಯಾಗದಿದ್ದಲ್ಲಿ ಆಮರಣಾಂತ ಉಪವಾಸ
ಉಡುಪಿ: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕೊಯ್ದ ಘಟನೆ ಬಗ್ಗೆ ದಿಗ್ಭ್ರಮೆ ವ್ಯ್ಕತಪಡಿಸಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಗೋವುಗಳು ಮೇಲೆ ನಡೆಸಿದ ಈ ಕೃತ್ಯ ಅತ್ಯಂತ ಕ್ರೌರ್ಯವಾದದ್ದು. ಇಂಥ ಪೈಶಾಚಿಕ ಕೃತ್ಯ ನಡೆಸಿದವರಿಗೆ ತ್ವರಿತಗತಿ ನ್ಯಾಯಾಲಯದ ಮೂಲಕ ಘೋರ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಆಮರಣಾಂತ ಉಪವಾಸ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಗೋವಿನ ಕೆಚ್ಚಲು ಸೀಳಿರುವುದು ಭೀಭತ್ಸ ಕೃತ್ಯ. ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ಹಿಂದೂಗಳ ಭಾವನೆ ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಬೇಕು ಎಂದು ಸರ್ಕಾರಗಳನ್ನು ಖಾರವಾಗಿ ಪ್ರಶ್ನಿಸಿರುವ ಶ್ರೀಗಳು, ಈಗ ನಡೆದಿರುವ ಕೃತ್ಯ ಅತ್ಯಂತ ಪೈಶಾಚಿಕವಾಗಿದೆ. ಕೋಟ್ಯಂತರ ಹಿಂದೂಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ. ಸರ್ಕಾರ ಕುರುಡು ನೆಪ ಹೇಳದೇ ಅಪರಾಧಿಗಳಿಗೆ ಘೋರ ಶಿಕ್ಷೆಯನ್ನು ತ್ವರಿತಗತಿ ನ್ಯಾಯಾಲಯದ ಮೂಲಕ ವಿಧಿಸಬೇಕು. ದೇಶದಲ್ಲಿ ಗೋವಿನ ಮೇಲಿನ ಕ್ರೌರ್ಯಕ್ಕೆ ತಾತ್ವಿಕ ಅಂತ್ಯ ಹಾಡಲೇಬೇಕು ಎಂದು ಅಯೋಧ್ಯೆಯಲ್ಲಿರುವ ಪೇಜಾವರ ಶ್ರೀಗಳು ವೀಡಿಯೊ ಸಂದೇಶ ಮೂಲಕ ಆಗ್ರಹಿಸಿದ್ದಾರೆ.