ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16902 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16902 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ


ಉಜಿರೆ: ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸ್ವಚ್ಛತೆಯೊಂದಿಗೆ ನಿರ್ಮಲವನ್ನಾಗಿಸಿದಾಗ ಅಲ್ಲಿಗೆ ಆಗಮಿಸುವ ಭಕ್ತರಿಗೆ ಮಾನಸಿಕ ನೆಮ್ಮದಿ ಶಾಂತಿ ಪ್ರಾಪ್ತವಾಗುತ್ತದೆ, ಸ್ವಚ್ಚತೆಯ ಪರಿಕಲ್ಪನೆ ಧಾರ್ಮಿಕ ಕೇಂದ್ರಗಳಿಂದ ಆರಂಭಗೊಂಡರೆ ರಾಜ್ಯದ ಪ್ರತೀ ಮನೆಯಲ್ಲಿಯೂ ಸ್ವಚ್ಚತೆಯ ಜಾಗ್ರತಿ ಮೂಡಿಸಬಹುದು, ‘ಸ್ವಚ್ಚತೆಯಡೆಗೆ ನಮ್ಮ ನಡಿಗೆ’ ಎಂಬ ದಿಟ್ಟ ನಿಲುವಿನೊಂದಿಗೆ ಜನರಲ್ಲಿ ಸ್ವಚ್ಚತೆಯ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ. 


ಈ ಅಭಿಯಾನದಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಸ್ವಯಂ ಸೇವಕರಾಗಿ ಪಾಲ್ಗೊಂಡು ವರ್ಷದಲ್ಲಿ 2 ಬಾರಿ ಅಂದರೆ ದೇಶದ ಸ್ವಾತಂತ್ರ್ಯೋತ್ಸವ ಮತ್ತು ಮಕರ ಸಂಕ್ರಾತಿಯ ಸಂದರ್ಭ ಸಪ್ತಾಹದ ಮೂಲಕ ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ಸ್ವಚ್ಛತಾ ಸಂದೇಶವನ್ನು ಸಾರುತ್ತಾರೆ.


ಕಳೆದ 9 ವರ್ಷಗಳಿಂದ ನಿರಂತರವಾಗಿ ಸ್ವ-ಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಮಕರ ಸಂಕಾಂತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಜನವರಿ 14 ರ ಮೊದಲು ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳು ಸ್ವಚ್ಚ ಮತ್ತು ಪಾವಿತ್ರ್ಯತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಜನವರಿ 7 ರಿಂದ 13 ರವೆರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಚತಾ ಸಪ್ತಾಹವನ್ನು ನಡೆಸಲಾಗುವುದು.


ರಾಜ್ಯದಾದ್ಯಂತ 16902 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು, ಸುಮಾರು 3,99,437 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮಪಂಚಾಯತ್‌ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article