
ಅಂಗಡಿಗೆ ನುಗ್ಗಿ ಢಿಕ್ಕಿಯಾದ ಕಾರು ವೃದ್ಧೆ ಸಾವು, ಗ್ರಾಹಕರೋರ್ವರಿಗೆ ಗಾಯ
Monday, February 24, 2025
ಬಂಟ್ವಾಳ: ನಿಯಂತ್ರಣ ತಪ್ಪಿದ್ದ ಕಾರೊಂದು ಅಂಗಡಿಯೊಳಗೆ ನುಗ್ಗಿದ ಪರಿಣಾಮ ಅಂಗಡಿಯ ಹೊರಗೆ ಕುಳಿತುಕೊಂಡಿದ್ದ ವೃದ್ಧೆ ಹಾಗೂ ಗ್ರಾಹಕರೋರ್ವರಿಗೆ ಢಿಕ್ಕಿಯಾಗಿ ವೃದ್ಧೆ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ವಾಮದಪದವು ಸಮೀಪದ ಪಾಲೆದಮರ ಎಂಬಲ್ಲಿಯ ಮಂಜುನಾಥ ಪೈ ಎಂಬವರ ದಿನಸಿ ಅಂಗಡಿಯಲ್ಲಿ ಅಪಘಾತ ಸಂಭವಿಸಿದ್ದು, ಮಂಜುನಾಥ ಪೈ ಅವರ ತಾಯಿ ಸುಮತಿ (91) ಅವರು ಮೃತಪಟ್ಟಿದ್ದು, ಸ್ಥಳೀಯರಾದ ಲೂಯಿಸ್ ಡಿ’ಕೋಸ್ತ ಅವರು ಗಾಯಗೊಂಡಿದ್ದಾರೆ.
ಸಂಜೆ ಸುಮಾರು 6.45ರ ಹೊತ್ತಿಗೆ ಇಲ್ಲಿನ ನಿವಾಸಿಯಾದ ಶೋಭಾ ಎಂಬವರು ಚಲಾಯಿಸುತ್ತಿದ್ದ ಕಾರು ಮಣಿಹಳ್ಳ-ವಾಮದಪದವು ಸಂಪರ್ಕ ರಸ್ತೆಯಲ್ಲಿ ಸಾಗುತ್ತಿದ್ದಾಗ ರಸ್ತೆ ಕೂಡುವಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಅಂಗಡಿಗೆ ನುಗ್ಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸುಮತಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ ಸುಮಾರು 11.45 ಗಂಟೆ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತ ಪಟ್ಟಿದ್ದರು. ಲೂಯಿಸ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆದ ದೃಶ್ಯ ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಜುನಾಥ್ ಅವರ ಅಳಿಯ ಗಣೇಶ್ ಮಲ್ಯ ಅವರ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.