
ಭೂಮಿಯನ್ನು ಸ್ವಾದೀನ ಪಡಿಸಿಕೊಂಡರೂ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕು: ಡಾ. ಭರತ್ ಶೆಟ್ಟಿ ವೈ.
Friday, February 28, 2025
ಮಂಗಳೂರು: ತುಳುನಾಡಿನ ದೈವರಾಧನೆ ಆಚರಣೆ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದ್ದು, ಸರ್ಕಾರವು ಭೂಮಿಯನ್ನು ಯಾವುದೋ ಕಾರಣಕ್ಕೆ ಸ್ವಾದೀನಪಡಿಸಿಕೊಂಡರೂ ವಾರ್ಷಿಕ ನೇಮ, ಇನ್ನಿತರ ಶುಭ ದಿನಗಳಲ್ಲಿ ಆಚರಣೆಗೆ ಅಡ್ಡಿ ಪಡಿಸದೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದರು.
ಎಂಎಸ್ಇಝೆಡ್ ಕೈಗಾರಿಕಾ ವ್ಯಾಪ್ತಿಯ ಒಳಭಾಗದಲ್ಲಿರುವ, ಬಜಪೆಯ ನೆಲ್ಲಿದಡಿ ಗುತ್ತು ಆರಾಧಿಸಿಕೊಂಡು ಬರುತ್ತಿರುವ ದೈವ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ ತೆರಳಿ ಪೂಜಾರಿ ಕಾರ್ಯಗಳನ್ನು ಮಾಡಲು ತಡೆವೊಡ್ದುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಅಸಮಧಾನ ವ್ಯಕ್ತಪಡಿಸಿರುವ ಶಾಸಕರು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ, ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಹಾಗೂ ದೈವಸ್ಥಾನಕ್ಕೆ ಬರಲು ಸೂಕ್ತ ಪ್ರತ್ಯೇಕ ಸಂಪರ್ಕ ರಸ್ತೆ ಮಾಡಿಕೊಡಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಅಭಿವೃದ್ಧಿಗಾಗಿ ಭೂಮಿ ತ್ಯಾಗ ಮಾಡಿ ಹೋದವರು ತಮ್ಮ ದೇವಸ್ಥಾನದಲ್ಲಿ ತಾವು ನಂಬಿದ ದೈವಗಳನ್ನು ಆರಾಧಿಸಿಕೊಂಡು ಬರುವ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ತುಳುನಾಡಿನ ಸಂಪ್ರದಾಯ ಸಂಸ್ಕೃತಿಯ ಸೂಕ್ಷ್ಮತೆಯನ್ನು ಅರಿತುಕೊಂಡು ಜನರೊಡನೆ ಬೆರೆತು ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.