ಜಗತ್ ಪ್ರಸಿದ್ಧ ಕಮ್ಯುನಿಸ್ಟ್ ಪ್ರಣಾಳಿಕೆ ಇಂದಿಗೂ ಪ್ರಸ್ತುತ: ಸುಕುಮಾರ್ ತೊಕ್ಕೋಟ್ಟು

ಜಗತ್ ಪ್ರಸಿದ್ಧ ಕಮ್ಯುನಿಸ್ಟ್ ಪ್ರಣಾಳಿಕೆ ಇಂದಿಗೂ ಪ್ರಸ್ತುತ: ಸುಕುಮಾರ್ ತೊಕ್ಕೋಟ್ಟು


ತೊಕ್ಕೋಟ್ಟು: ಪ್ರಪಂಚದಲ್ಲಿ ಅತೀ ಹೆಚ್ಚು ಮುದ್ರಿತವಾಗಿರುವ ಪುಸ್ತಕಗಳ ಪೈಕಿ ಕಮ್ಯುನಿಸ್ಟ್ ಪ್ರಣಾಳಿಕೆ ಮೂರನೆಯ ಸ್ಥಾನವನ್ನು ಹೊಂದಿದೆ. ಕಾರ್ಲ್ ಮಾರ್ಕ್ಸ್ ಹಾಗೂ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ ಸಮಾಜವನ್ನು ಅಮೂಲಾಗ್ರವಾಗಿ ಬದಲಾಯಿಸುವ ವೈಜ್ಞಾನಿಕ ಪುಸ್ತಕವಾಗಿದೆ. ಹಾಗೂ ಅದು ಪ್ರಕಟವಾದ ದಿನವಾದ 1848ರ ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಕೆಂಪು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ. 177 ವರ್ಷಗಳ ಹಿಂದೆ ಪ್ರಕಟವಾದ ಕಮ್ಯುನಿಸ್ಟ್ ಪ್ರಣಾಳಿಕೆಯು ಜ್ಯೋತಿಷ್ಯವೂ ಅಲ್ಲ, ಬ್ರಹ್ಮನ ಕಾಲಜ್ಞಾನವೂ ಅಲ್ಲ. ಅದು ಭವಿಷ್ಯದ ಸೂಚಕವಾಗಿದ್ದು, ಅದರಲ್ಲಿರುವ ಪ್ರತಿಯೊಂದು ಅಂಶಗಳೂ ಇಂದಿಗೂ ಪ್ರಸ್ತುತವಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೋಟ್ಟು ಹೇಳಿದರು.


ಅವರು ಅಂತರಾಷ್ಟ್ರೀಯ ಕೆಂಪು ಪುಸ್ತಕ ದಿನಾಚರಣೆಯ ಅಂಗವಾಗಿ ಸಿಪಿಐಎಂ ತೊಕ್ಕೋಟ್ಟು ಕಚೇರಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ವಿಚಾರವನ್ನು ಮಂಡಿಸಿ ಮಾತನಾಡಿದರು.

ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮಾತನಾಡಿ, ದುಡಿಯುವ ವರ್ಗದ ಕಲ್ಯಾಣ ರಾಜ್ಯ ಉದಯವಾಗುವುದು ಅನಿವಾರ್ಯ ಬೆಳವಣಿಗೆಯಾಗಿದೆ ಎಂದು ಮಾರ್ಕ್ಸ್ ಈ ಮೊದಲೇ ಹೇಳಿದ್ದು, ಅದಕ್ಕಾಗಿ ಬಂಡವಾಳದಾರರಿಗೆ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ, ದುಡಿಯುವ ವರ್ಗದ ಪ್ರಭುತ್ವ ಎಂದರೆ ಪರಮದ್ವೇಷ. ಅದಕ್ಕಾಗಿ ಈ ಬಂಡವಾಳದಾರರು ಜಾಗತಿಕ ಮಟ್ಟದಲ್ಲಿ ತನ್ನೆಲ್ಲ ಶಕ್ತಿಯನ್ನು ಕ್ರೋಢೀಕರಿಸಿ ಕಮ್ಯುನಿಸಂನ ವಿರುದ್ಧ ಭಾರೀ ಅಪಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಮ್ಯುನಿಸ್ಟ್ ಪ್ರಣಾಳಿಕೆ ಕಮ್ಯುನಿಸ್ಟರಿಗೆ ಮಾತ್ರ ಒಂದು ದಾಖಲೆಯಲ್ಲ, ಬದಲಾವಣೆಯನ್ನು ಬಯಸುವ ಎಲ್ಲರಿಗೂ ಆಶಾದಾಯಕವಾದ ಮಹಾಕಾವ್ಯವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ ಸೃಷ್ಠಿಯಾದ ಹಸಿವು ಬಡತನ ಅನಕ್ಷರತೆ ನಿರುದ್ಯೋಗ ಮುಂತಾದ ಅನಿಷ್ಠಗಳ ವಿರುದ್ಧದ ಅತ್ಯುತ್ತಮ ಔಷಧವಾಗಿದೆ ಈ ಕಮ್ಯುನಿಸ್ಟ್ ಪ್ರಣಾಳಿಕೆ ಎಂದು ಹೇಳಿದರು.


ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಸಿಪಿಐಎಂ ಹಿರಿಯ ಮುಖಂಡರಾದ ಸುಂದರ ಕುಂಪಲ, ಯು.ಬಿ. ನಾರಾಯಣ, ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರಾದ ರೋಹಿದಾಸ್ ಭಟ್ನಗರ, ಜನಾರ್ದನ ಕುತ್ತಾರ್, ಪ್ರಮೋದಿನಿ ಕಲ್ಲಾಪು, ವಿಲಾಸಿನಿ, ಇಬ್ರಾಹಿಂ ಮದಕ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article