
ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಕ್ರೋಶ
Thursday, February 6, 2025
ಉಡುಪಿ: ನೂರು ದಿನದಲ್ಲಿ ಮಾಡಬಹುದಾದ ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಎಂಟು ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಅವ್ಯವಸ್ಥೆಯನ್ನು ಖಂಡಿಸಿ ಎರಡನೇ ಹಂತದ ಬೃಹತ್ ಹೋರಾಟಕ್ಕೆ ಇಂದ್ರಾಳಿ ರೈಲ್ವೆ ಸೇತುವೆ ಹೋರಾಟ ಸಮಿತಿ ಸಿದ್ದತೆ ನಡೆಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಅಮೃತ್ ಶೆಣೈ ಎಚ್ಚರಿಕೆ ನೀಡಿದರು.
ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಫೆ.8ರಂದು ಕುಂಜಿಬೆಟ್ಟು ಶಾರದಾ ಮಂಟಪ ಆವರಣದ ಜ್ಞಾನ ಮಂದಿರದಲ್ಲಿ ಸಂಜೆ 4 ಗಂಟೆಗೆ ಸಮಾಲೋಚನೆ ಸಭೆ ನಡೆಯಲಿದೆ. ರೈಲ್ವೆ ಸೇತುವೆ ಕಾಮಗಾರಿಯನ್ನು ಜ.30ರೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಪರ್ಕಳ, ಸಂತೆಕಟ್ಟೆ, ಆದಿವುಡುಪಿ, ಅಂಬಲಪಾಡಿ ಇತ್ಯಾದಿ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆ ವಿರುದ್ದವೂ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಸಮಿತಿ ಹೆಸರನ್ನು ಉಡುಪಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ಹೋರಾಟ ಸಮಿತಿ ಎಂದು ಬದಲಾಯಿಸುವ ಯೋಚನೆ ಇದೆ ಎಂದರು.
ಸಮಿತಿಯ ಮುಖಂಡ ರಮೇಶ್ ಕಾಂಚನ್ ಮಾತನಾಡಿ, ಹೈವೇ ಕಾಮಗಾರಿ ಬಗ್ಗೆ ಉಡುಪಿಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಶಾಸಕರು, ಸಂಸದರು ಇನ್ನೊಬ್ಬರ ಮೇಲೆ ಆರೋಪ ಮಾಡುವ ಬದಲು ತಮ್ಮ ಜವಾಬ್ದಾರಿ ಅರಿತು ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಕೀರ್ತಿ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ ಮತ್ತು ಅನ್ಸರ್ ಅಹಮ್ಮದ್ ಇದ್ದರು.