
ಉರಿಬಿಸಿಲಿಗೆ ಕಾರಿಂಜ ಬೆಟ್ಟವನ್ನೇರಿದ ಕೋತಿರಾಜ್!
Sunday, March 23, 2025
ಬಂಟ್ವಾಳ: ಒಂದೆಡೆ ಊರಿ ಬಿಸಿಲು,ಮತ್ತೊಂದೆಡೆ ಕಾದ ಕಾವಲಿನಂತಾದ ಬೃಹತ್ ಬಂಡೆ, ನೇರ ಆಕಾಶದತ್ತ ಮುಖ ಮಾಡಿರುವ ಬಂಟ್ವಾಳ ತಾಲೂಕಿನ ಪುರಾಣಪ್ರಸಿದ್ದ ಕಾರಿಂಜಕ್ಷೇತ್ರದ 350 ಮೀ.ಎತ್ತರದ ಬೆಟ್ಟವನ್ನು ಏರುವುದು ಸುಲಭದ ಮಾತಲ್ಲ, ಆದರೆ ಕರ್ನಾಟಕದ ‘ಸ್ಪೆಡರ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಅವರು ಕೇವಲ ಆರ್ಧತಾಸಿನಲ್ಲಿ ಸಲೀಸಾಗಿ ಏರುವ ಮೂಲಕ ನೆರೆದ ಜನರ ಗಮನಸೆಳೆದರು.
ಭಾನುವಾರ ಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಕಾರಿಂಜ ಬಂಡೆಯನ್ನು ಅರ್ಧ ತಾಸಿನಲ್ಲೇ ಸರಸರನೇ ಏರುವ ಮೂಲಕ ಸಾಹಸಗೈದು ದಾಖಲೆ ಬರೆದಿದ್ದಲ್ಲದೆ ನೆರದಿದ್ದ ಜನರನ್ನು ಕೂಡ ಒಂದುಕ್ಷಣ ಹುಬ್ಬೇರಿಸುವಂತೆ ಮಾಡಿದರು.
ರಾಜ್ಯದ ಅತ್ಯಂತ ಪ್ರಾಚೀನ ಶಿವಾಲಯವಾಗಿರುವ ಕಾರಿಂಜ ಕ್ಷೇತ್ರವು ಸಮುದ್ರಮಟ್ಟದಿಂದ 1200 ಅಡಿ ಎತ್ತರವಿದ್ದು, 800 ಅಡಿಗಳ ಎತ್ತರದಲ್ಲಿ ಏಕೈಕ ಶಿಲೆಯ ಮೇಲೆ ದೇಗುಲವಿದೆ. ಸುತ್ತಲೂ ಬೃಹದಾಕಾರದ ಕಲ್ಲುಬಂಡೆಗಳು, ಕ್ಷೇತ್ರದ ದಕ್ಷಿಣ ಭಾಗಕ್ಕೆ ಹಬ್ಬಿರುವ ಬೃಹತ್ ಕೊಡ್ಯಮಲೆ ಅರಣ್ಯ, ಚಾರಣ ಪ್ರಿಯರಿಗೆ ಇದು ಅತ್ಯಂತ ನೆಚ್ಚಿನ ತಾಣವು ಆಗಿದೆ. ಇದೊಂದು ಪ್ರವಾಸಿ ಗಿರಿಧಾಮವಾಗಿದ್ದು ಪ್ರವಾಸಿಗರನ್ನು ಬಹುದೂರದಿಂದಲೇ ತನ್ನತ್ತ ಸೆಳೆಯುತ್ತದೆ.
ಜ್ಯೋತಿರಾಜ್ ಅವರು ಈ ಬೃಹತ್ ಬಂಡೆಯನ್ನು ಏರುವ ಸವಾಲು ತೆಗೆದುಕೊಂಡಿದ್ದು, ರವಿವಾರ ಬೆಳಗ್ಗೆ ದೇವಸ್ಥಾನದ ಹಿಂಭಾಗದಿಂದ ಏರಿದರು. ಆರಂಭದಲ್ಲಿ ರೋಪ್ ಸಹಾಯದಿಂದ ಮೇಲೇರಿದ ಅವರು ಅರ್ಧದ ಬಳಿಕ ಬರಿಗೈಯಲ್ಲಿ ತನ್ನ ಸಾಹಸ ಪ್ರದರ್ಶಿಸಿ ನೆರೆದವರನ್ನು ರೋಮಾಂಚನಗೊಳಿಸಿದರು. ಬೆಳಗ್ಗೆ ಸುಮಾರು 10 ಗಂಟೆಗೆ ಹತ್ತಲು ಆರಂಭಿಸಿದ ಅವರು ಅರ್ಧ ಗಂಟೆಯಲ್ಲಿ 350 ಮೀ.ಎತ್ತರವನ್ನು ನಿರಾಯಾಸವಾಗಿ ಏರಿ ಮೇಲ್ಬಾಗದಲ್ಲಿ ಕಾರಿಂಜೇಶ್ವರನ ಸನ್ನಿಧಿ ತಲುಪಿದರು.
ನೋಡುಗರ ಮೈಜುಮ್ಮೆನಿಸುವ ರೀತಿಯಲ್ಲಿ ಸುಡು ಬಿಸಿಲಿಗೆ ಅವರು ಬೆಟ್ಟವನ್ನು ಏರುವ ದೃಶ್ಯ ಕೆಲವರ ಕಣ್ಣುಗಳನ್ನು ಒದ್ದೆಯಾಗಿಸಿತು. ಬಿಸಿಲಿನ ತಾಪಕ್ಕೆ ಕಾದು ಸುಡುವ ಕಲ್ಲಿನ ಮೇಲೆ ಏರುವ ಅವರ ಸಾಹಸಕ್ಕೆ ಕಾರಿಂಜದಲ್ಲಿ ನೆರೆದ ನೂರಾರು ಜನರು ಹರ್ಷೋದ್ಘಾರ ವ್ಯಕ್ತಪಡಿಸಿ ಜೈಕಾರ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಬೆಟ್ಟದ ಕೆಳಗೆ ಭಗವದ್ವಜವನ್ನಿತ್ತು ಅವರ ಸಾಹಸಕ್ಕೆ ಚಾಲನೆ ನೀಡಲಾಯಿತು. ಕೊನೆಯಲ್ಲಿ ಅವರು ಭಗವಧ್ವಜ ಹಾಗೂ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದರು. ಇದರೊಂದಿಗೆ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿತು. ಬಳಿಕ ಶ್ರೀ ಕಾರಿಂಜೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ದೇಗುಲದ ವತಿಯಿಂದ ಮೇನೇಜರ್ ವಿನಯ್ ಕುಮಾರ್ ಹಾಗೂ ಸಿಬಂದಿ ವರ್ಗ ಕೋತಿರಾಜ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಪ್ರಮುಖರಾದ ದಿನೇಶ್ ನಾಯಕ್, ಪ್ರಸನ್ನ ಮತ್ತಿತರರಿದ್ದರು.
ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ.ಜಿಲ್ಲೆಯ ಬಂಟ್ವಾಳದತ್ತ ಆಗಮಿಸಿ ತನ್ನ ಸಾಹಸದ ಪ್ರದರ್ಶನಕ್ಕೆ ಮುಂದಾಗಿದ್ದರು. ಕೈಂಬಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಅವರು ರಸ್ತೆ ಬದಿಯಲ್ಲಿ ಅನಾಥವಾಗಿರುವ ಮಕ್ಕಳಿಗೆ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಆ ಮೂಲಕ ಸಾಹಸ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದಾರೆ. ಕರ್ನಾಟಕದ ಬೇರೆ ಕಡೆಗಳಿಗೆ ತೆರಳಿ ಸಾಹಸ ಪ್ರದರ್ಶನ ಮಾಡುತ್ತಾ ಅದರಲ್ಲಿ ಬಂದ ಹಣವನ್ನು ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆಗೆ ವಿನಿಯೋಗಿಸುವ ಕನಸು ಇದೆ ಎನ್ನುತ್ತಾರೆ. ವಿದೇಶದಲ್ಲಿಯೂ ಇದೇ ರೀತಿ ಸಾಹಸ ಮಾಡಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶ ಹೊಂದಿದ್ದಾರೆ. ಅಮೆರಿಕದ ಏಂಜಲ್ ಫಾಲ್ಸ್ ಹತ್ತುವ ನಿರೀಕ್ಷೆ ಹೊಂದಿದ್ದೇನೆ ಎನ್ನುತ್ತಾರೆ.
ಕೋತಿರಾಜ್ ಅವರ ಬೆಟ್ಟ ಹತ್ತುವ ಸಾಹಸದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಸಿಬ್ಬಂದಿಗಳಾಗಲೀ, ಅಗ್ನಿಶಾಮಕ ದಳದ ಸಿಬ್ಬಂದಿಗಳಾಗಲಿ ಇರಲಿಲ್ಲ,ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದು,ಅವರ ಬೆಟ್ಟವನ್ನೇರುವ ಉತ್ಸಾಹಕ್ಕೆ ಸ್ಪೂರ್ತಿ ನೀಡಿತು.