
ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹುತಿ
Sunday, March 9, 2025
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹುತಿಯಾದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಇಲ್ಲಿನ ಜಯರಾಮ ಗೌಡ ಅವರ ಮಾಲಕತ್ವದ ಐಗ್ರೋ ಇನ್ ಕಾರ್ಪ್ ಎಂಬ ಹೆಸರಿನ ಮಿಲ್ ಅಗ್ನಿಗಾಹುತಿಯಾಗಿದ್ದು ಸುಮಾರು ಮೂರು ಕೋಟಿ ರೂ. ಮೌಲ್ಯದ ಸೊತ್ತುಗಳು ನಾಶವಾಗಿದೆ.
ಜಯರಾಮ ಅವರ ಮನೆ ಮಿಲ್ನ ಸಮೀಪವೇ ಇದ್ದು, ಶನಿವಾರ ರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅವರು ಸ್ಥಳಿಯರನ್ನು ಹಾಗೂ ಅಗ್ನಿಶಾಮಕ ದಳವನ್ನು ಕರೆಸಿದ್ದರು. ಆದರೆ ಬೆಂಕಿಯ ಶಾಖ ಪ್ರಖರವಾಗಿದ್ದ ಕಾರಣ ಯಾರೂ ಸಮೀಪ ಹೋಗಲಾಗಿರಲಿಲ್ಲ. ಬಳಿಕ ಬಂಟ್ವಾಳ ಅಗ್ನಿ ಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನಿಸಿದರೂ ಅದಾಗಲೇ ಮಿಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮಿಲ್ನಲ್ಲಿ ಸುಮಾರು 12 ಟನ್ಗಳಷ್ಟು ತೆಂಗಿನ ಎಣ್ಣೆ ಹಾಗೂ ಕಚ್ಛಾ ತೆಂಗಿನಕಾಯಿ, ಮೆಷಿನರಿಗಳು ಎಲ್ಲವೂ ಸುಟ್ಟು ಕರಕಲಾಗಿದೆ ಸುಮಾರು ಮೂರು ಕೋಟಿ ರೂ.ನಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಜಯರಾಮ ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.