
ಎ.5 ರಂದು ಶ್ರೀ ನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನದ 10ನೇ ವರ್ಷದ ವರ್ಧಂತ್ಯೋತ್ಸವ
Monday, March 31, 2025
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ರೋಯಲ್ ಸಭಾಭವನದ ಹತ್ತಿರದ ಶ್ರೀ ನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನದ 10ನೇ ವರ್ಷದ ವರ್ಧಂತ್ಯೋತ್ಸವವು ಎ.5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವರ್ಧಂತ್ಯೋತ್ಸವದ ದಶಮಾನೋತ್ಸವದ ಪ್ರಯುಕ್ತ ಎ.4 ರಂದು ಸಂಜೆ 5.30ಕ್ಕೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶ ಸ್ಥಾಪನೆ, ಬೊಬ್ಬರ್ಯ, ಹ್ಯಾಗುಳಿ ಮತ್ತು ಕೀಳು ದೇವರಿಗೆ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 8 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಚಾಡಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.
ಎ.5 ರಂದು ಬೆಳಗ್ಗೆ 9ಕ್ಕೆ ಶ್ರೀ ನಾಗದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮ, ಮಹಾಪೂಜೆ, ನಾಗದೇವರ ದರ್ಶನ ನಡೆಯಲಿದೆ.
ಬೆಳಗ್ಗೆ 11.30ಕ್ಕೆ ಧರ್ಮಸ್ಥಳದ ಮೇಳದ ಗಣಪತಿ ದೇವರಿಗೆ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 12 ಗಂಟೆಗೆ "ಪಲ್ಲಪೂಜೆ", 12.30ಕ್ಕೆ ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಬಳಿಕ ಸೇವಾಕರ್ತರಿಂದ 'ಸಾರ್ವಜನಿಕ ಮಹಾ ಅನ್ನಸಂತರ್ಪಣೆ' ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ಕ್ಕೆ ಶ್ರೀ ಮೈಲಾರೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ. ಸಂಜೆ 6 ಗಂಟೆಗೆ ಸೇವಾ ಕರ್ತರಿಂದ ವಿಶೇಷ 'ರಂಗಪೂಜೆ' ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 7 ಗಂಟೆಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ "ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ" ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ದೇವಳದ ಅಧ್ಯಕ್ಷ ಯು. ರಾಧಾಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.