ಸುರತ್ಕಲ್-ಬಿ.ಸಿ. ರೋಡ್ ರಾ,ಹೆ. ದುರಸ್ತಿಗೆ 26 ಕೋಟಿ ಮಂಜೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ

ಸುರತ್ಕಲ್-ಬಿ.ಸಿ. ರೋಡ್ ರಾ,ಹೆ. ದುರಸ್ತಿಗೆ 26 ಕೋಟಿ ಮಂಜೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಬಿಸಿರೋಡ್-ಸುರತ್ಕಲ್ ನಡುವೆ 37.42 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ತಾತ್ಕಾಲಿಕ ದುರಸ್ತಿ ಕಾರ್ಯಗಳಿಗೆ 26 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಎ.10ರಿಂದ ದುರಸ್ತಿ ಕಾರ್ಯ ಆರಂಭಗೊಳ್ಳಲಿದ್ದು, ಮಳೆಗಾಲ ಪ್ರಾರಂಭದ ಮುನ್ನ ಪೂರ್ಣಗೊಳಿಸಲಾಗುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ಮರು ಡಾಂಬರೀಕರಣ, ತುಂಬೆ ಕಾಲೇಜು ಬಳಿ ಹೆದ್ದಾರಿಯಲ್ಲಿ ನೀರು ನಿಲ್ಲುವ ಸ್ಥಳದಲ್ಲಿ ಸಮಸ್ಯೆ ಬಗೆಹರಿಸಲು ಚರಂಡಿ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆ ಅಳವಡಿಕೆ, ಸರ್ವಿಸ್ ರಸ್ತೆಗಳ ದುರಸ್ತಿ, ರಸ್ತೆ ಬದಿ ಸ್ವಚ್ಛತೆ ಕಾಮಗಾರಿಯಲ್ಲಿ ಒಳಗೊಂಡಿದೆ. ಸುರತ್ಕಲ್‌ನಿಂದ ಬೈಕಂಪಾಡಿ, ಕೂಳೂರಿನಿಂದ ಎಜೆ ಆಸ್ಪತ್ರೆ, ನಂತೂರಿನಿಂದ ಪಡೀಲ್‌ವರೆಗೆ ಡಾಂಬರೀಕರಣ ನಡೆಯಲಿದೆ. ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸುರತ್ಕಲ್- ಬಿಸಿರೋಡ್ ನಡುವೆ ಹೆದ್ದಾರಿ ನಿರ್ವಹಣೆಯನ್ನು ವಿಶೇಷ ಉದ್ದೇಶದ ವಾಹನ (ಎಸ್‌ಪಿವಿ) ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್ ನಿರ್ವಹಿಸುತ್ತಿದ್ದು, ಇದರಿಂದ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಎಸ್‌ಪಿವಿ ವಿಸರ್ಜಿಸಿ ಹೆದ್ದಾರಿ ನಿರ್ವಹಣೆಯ ಹೊಣೆಯನ್ನು ಎನ್‌ಎಚ್‌ಎಐಗೆ ವಹಿಸುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಸಚಿವರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಶೀಘ್ರದಲ್ಲಿ ಎಸ್‌ಪಿವಿ ವಿಸರ್ಜನೆಗೊಳ್ಳಲಿದೆ ಎಂದರು.

ಮಂಗಳೂರಿನ ನಂತೂರು ವೃತ್ತದಲ್ಲಿ ಹೆದ್ದಾರಿ ಕಾಮಗಾರಿಗಳು ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಮಳೆಗಾಲಕ್ಕೆ ಮುನ್ನ ಫ್ರೀ ಲೆಫ್ಟ್ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಎಪ್ರಿಲ್ ಎರಡನೇ ವಾರದಲ್ಲಿ ಹೊಸ ರೈಲು ಪ್ರಯಾಣಕ್ಕೆ ಚಾಲನೆ ದೊರೆಯಲಿದೆ ಎಂದರು.

ಮಾಜಿ ಕಾರ್ಪೋರೇಟರ್‌ಗಳಾದ ಸುನೀತಾ, ಭಾಸ್ಕರಚಂದ್ರ ಶೆಟ್ಟಿ, ಪ್ರಮುಖರಾದ ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article