
ಹಾಲಿನ ಬೆಲೆ ಏರಿಕೆ, ಸಂಕಷ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳು: ಡಾ. ಮಂಜುಳ ಅನಿಲ್ ರಾವ್
ಮಂಗಳೂರು: ಭಾಗ್ಯಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ, ಇಂದು ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಮೂಲಕ ಸಾಮಾನ್ಯ ನಾಗರಿಕರ ಜೀವನವನ್ನು ಹಾಳು ಮಾಡುತ್ತಿದೆ. ಜನಪರ ಆಡಳಿತವೆಂಬ ಅವರ ಮಾತು ಕೇವಲ ಹುಸಿ ಭರವಸೆಯಾಗಿದ್ದು, ಹೊಸ ಹೊಸ ಹಗರಣಗಳ ಮೂಲಕ ಹಗಲು ದರೋಡೆ ನಡೆಸುತ್ತಿದೆ ಎಂದು ದ.ಕ. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಡಾ. ಮಂಜುಳ ಅನಿಲ್ ರಾವ್ ಪ್ರಕಟಣೆಯಲ್ಲಿ ದೂರಿದ್ದಾರೆ.
ಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿತ್ಯ ಬಳಕೆಯ ವಸ್ತುಗಳು, ಆಹಾರ ಧಾನ್ಯಗಳು, ವಿದ್ಯುತ್ ದರ, ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಅದರ ಜೊತೆಗೆ, ಮಕ್ಕಳಿಗೆ ಪೌಷ್ಟಿಕ ಆಹಾರವೂ ಕೈಗೆಟುಕದಂತಾಗಿದೆ. ಇಪ್ಪತ್ತು ತಿಂಗಳಿನಲ್ಲಿ ಮೂರು ಬಾರಿ ಹಾಲಿನ ದರ ಏರಿಸಿ ಸಾಮಾನ್ಯ ಮಹಿಳೆಯರು, ಹಸುಗೂಸುಗಳು, ಮತ್ತು ಮಕ್ಕಳಿಗೆ ಹಾಲು ಮರೀಚಿಕೆ ಎನ್ನುವಂತೆ ಈ ಸರಕಾರ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಸಚಿವರಿಗೆ ಈ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲವೇ? ಅಥವಾ ಈ ಸಮಸ್ಯೆಗಳನ್ನು ಗಮನಿಸದಂತೆ ಅವುಗಳನ್ನು ಕಡೆಗಣಿಸುತ್ತಿದ್ದಾರೆಯೇ?
ಮಹಿಳೆಯರ ಸುರಕ್ಷತೆ, ಉದ್ಯೋಗ, ಮತ್ತು ಕುಟುಂಬಗಳ ಆರ್ಥಿಕ ಸ್ಥಿತಿಯೂ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಬೆಲೆ ಏರಿಕೆ ನಿಯಂತ್ರಿಸುವ ಬದಲು, ಸರ್ಕಾರ ಜನರ ಕಷ್ಟಗಳಿಗೆ ಕಿವಿಗೊಡದೆ ಬಂಡವಾಳದ ರಾಜಕಾರಣ ಮಾಡುತ್ತಿದೆ. ಜನಪರ ಆಡಳಿತದ ಬದಲು ಲೂಟಿಕೋರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯನ್ನು ಖಂಡಿಸುತ್ತಾ, ಜನರಿಗೆ ಸತ್ಯವನ್ನು ತಲುಪಿಸಲು ನಿರಂತರ ಹೋರಾಟ ಮಾಡಲಾಗುವುದು ಎಂದು ಡಾ. ಮಂಜುಳಾ ಅನಿಲ್ ರಾವ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.