
ಹಿಂದೂ ಸಮಾಜದ ಮನೆಗಳಲ್ಲೂ ಅಸ್ಪ್ರಶ್ಯತೆ ನಿವಾರಣೆಯ ಸಂಕಲ್ಪ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ಕರೆ
ಮಂಗಳೂರು: ಹಿಂದೂ ದೇವಾಲಯ, ಭಜನಾ ಮಂದಿರ ಸಹಿತ ಧಾರ್ಮಿಕ ಕೇಂದ್ರಗಳಲ್ಲಿ ಸಮಾಜದ ಎಲ್ಲ ಜಾತಿಯ ಜನರು ಒಂದಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಈ ವಾತಾವರಣ ಸಮಾಜದ ಎಲ್ಲ ಹಿಂದೂ ಮನೆಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ಹೇಳಿದರು.
ಸಾಮರಸ್ಯ ವೇದಿಕೆ ಮಂಗಳೂರು ನಗರದ ಕೆನರಾ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಾಮರಸ್ಯದ ಪ್ರತಿಮೆಗಳು’ ಕೃತಿ ಅನಾವರಣಗೊಳಿಸಿ ಅವರು ಮಾತನಾಡಿಸಿದರು.
ಸಮಾಜದಲ್ಲಿ ಸಾಮರಸ್ಯ ಗಟ್ಟಿಯಾದರೆ ಧರ್ಮ ಉಳಿಯುತ್ತದೆ. ಇಲ್ಲದಿದ್ದರೆ ಧರ್ಮಕ್ಕೆ ಅಪಾಯ. ಹಿಂದಿನ ಕಾಲದಲ್ಲಿ ಇದ್ದ ಕೆಲ ಸಮಾಜ ಬಾಂಧವರ ಬೌದ್ಧಿಕ ಮಟ್ಟ, ಶಿಕ್ಷಣದ ಕೊರತೆಯಿಂದ ಕಾಣಿಸಿಕೊಂಡ ವಿಕೃತಿ ಕೆಲವು ಕಡೆ ಮುಂದುವರಿಯುತ್ತಿರಬಹುದು. ಇಂದು ಜಗತ್ತೇ ಬದಲಾಗಿದೆ. ವಿಶಾಲ ಚಿಂತನೆ ಜನರು ಹೆಚ್ಚುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ಕೆಲವು ರಾಜಕೀಯ ಪಕ್ಷ, ಸಂಘಟನೆಗಳು ಸನಾತನ ಧರ್ಮವನ್ನು ಒಡೆಯುವ ಕೆಲಸಕ್ಕೆ ಮುಂದಾಗಿವೆ. ಅಸಂವಿಧಾನಿಕವಾಗಿ ಸರ್ಕಾರದ ಸೌಲಭ್ಯಗಳನ್ನು ಹಂಚುತ್ತಿವೆ. ಸನಾತನ ಹಿಂದೂ ದರ್ಂದ ಜನರು ಇಂದು ಎಚ್ಚೆತ್ತುಕೊಳ್ಳುವುದು ಕಾಲದ ಆವಶ್ಯಕತೆ ಎಂದು ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ತಿಳಿಸಿದರು.
ಅಸ್ಪ್ರಶ್ಯತೆಯಿಂದ ದೇಶಕ್ಕೆ ನಷ್ಟ:
ಅಸ್ಪ್ರಶ್ಯತೆಯಿಂದ ದೇಶಕ್ಕೆ ನಷ್ಟ. ದಲಿತರಿಗೆ ಮಾತ್ರವಲ್ಲದೆ, ಸವರ್ಣೀಯರಿಗೆ ಕೂಡ ನಷ್ಟವಾಗಿದೆ. ಒಂದು ಕಾಲದಲ್ಲಿ ಆಯುಧಗಳನ್ನು ಹಿಡಿಯುವ ಅಧಿಕಾರ ಕೂಡ ಎಲ್ಲರಿಗೆ ಇರಲಿಲ್ಲ ಎಂದು ಮುಖ್ಯ ಅತಿಥಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಕಿಶೋರ್ ಮಕ್ವಾನ ಹೇಳಿದರು.
ಅಂಬೇಡ್ಕರ್ ಹಿಂದೂ ವಿರೋಧಿಯಾಗಿರಲಿಲ್ಲ. ಬದಲಾಗಿ ಹಿಂದೂ ಧರ್ಮ ಸಂಘಟನೆ ರಾಷ್ಟ್ರೀಯ ಕಾರ್ಯ ಎಂದು ಅವರು ನಂಬಿದ್ದರು. ಆದರೆ ಸಮಾಜದಲ್ಲಿರುವ ಅಸ್ಪ್ರಶ್ಯತೆಯ ಮಾನಸಿಕ ವಿಕೃತಿಯನ್ನು ದೂರ ಮಾಡುವ ಆವಶ್ಯಕತೆ ಇದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಅಂಬೇಡ್ಕರ್ ಕುರಿತು ಸುಳ್ಳು ಪ್ರಚಾರ ನಡೆಸುವ ಕೆಲಸ ನಿರಂತರ ನಡೆಯುತ್ತಾ ಬಂದಿದೆ ಎಂದು ಅವರು ತಿಳಿಸಿದರು.
ಅಖಿಲ ಭಾರತ ಸಾಮಾಜಿಕ ಸಾಮರಸ್ಯ ಸಂಯೋಜಕ್ ಶ್ಯಾಮಪ್ರಸಾದ್ ಅವರು ತೆಲುಗಿನಲ್ಲಿ ಬರೆದ ‘ಸಾಮರಸ್ಯದ ಪ್ರತಿಮೆಗಳು’ ಕೃತಿಯನ್ನು (ಕನ್ನಡಕ್ಕೆ ಅನುವಾದ ಜನಮೇಜಯ ಉಮರ್ಜಿ) ಸ್ವಾಮೀಜಿ ಅನಾವರಣಗೊಳಿಸಿದರು.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಕಿಶೋರ್ ಮಕ್ವಾನ, ಪುಸ್ತಕದ ಮೂಲ ಲೇಖಕ ಶ್ಯಾಮಪ್ರಸಾದ್ ಹಾಗೂ ಅನುವಾದಕ ಜನಮೇಜಯ ಉಮರ್ಜಿ, ಸಾಮರಸ್ಯ ವೇದಿಕೆ ದಾವಣಗೆರೆ ರುದ್ರಯ್ಯ ಉಪಸ್ಥಿತರಿದ್ದರು. ಸಾಮರಸ್ಯ ವೇದಿಕೆ ಮಂಗಳೂರು ಸಂಚಾಲಕ ಜಯಪ್ರಕಾಶ್ ಸ್ವಾಗತಿಸಿದರು.