
ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಪ್ರಾತ್ಯಕ್ಷಿಕೆ ಹಾಗೂ ‘ಮುದ್ರಾ ಯೋಗ’ ಕೈಪಿಡಿ ಲೋಕಾರ್ಪಣೆ
ಮಂಗಳೂರು: ಇತ್ತೀಚಿಗೆ ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.
ಗೋಪಾಲಕೃಷ್ಣ ಅವರು ಯೋಗ ಮುದ್ರೆಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿ, ಮುದ್ರೆಗಳು ಯೋಗದ ಒಂದು ಅಂಗ, ಪಂಚಭೂತಗಳನ್ನು ಪ್ರತಿನಿಧಿಸುವ ಕೈಯಲ್ಲಿನ ಐದು ಬೆರಳುಗಳಿಂದ ಮಾಡುವ ಮುದ್ರೆಗಳು ಹೇಗೆ ಪಂಚತತ್ವಗಳ ಸಮತೋಲನ ಸ್ಥಿತಿಗೆ ಕಾರಣವಾಗುತ್ತವೆ ಎಂದು ವಿವರಿಸಿದರು.
ಹಿರಿಯ ಯೋಗ ತಜ್ಞ ದೇಲಂಪಾಡಿ ಅವರು ವರ್ಣಚಿಕಿತ್ಸೆ ಬಗ್ಗೆ ಮಾತನಾಡಿ, ಪ್ರಕೃತಿಯಲ್ಲಿರುವ ಪ್ರತಿಯೊಂದು ಬಣ್ಣವೂ ನಮ್ಮ ಆರೋಗ್ಯದ ಮೇಲೆ ನಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಿರುತ್ತದೆ. ಕೆಲವು ಕಾಯಿಲೆಗಳನ್ನು ಬಣ್ಣಗಳ ಆಸ್ವಾದನೆ, ನೋಟದಿಂದಲೇ ಗುಣಪಡಿಸಬಹುದು ಎಂದರು.
ಸರಳ ಭಾಷೆಯಲ್ಲಿ ದೇಹದ ಚಕ್ರಗಳ ಮಹತ್ವದ ಬಗ್ಗೆ ಮಾತನಾಡಿ, ಚಕ್ರ-ಆಧಾರಿತ ಚಿಕಿತ್ಸೆಗಳು ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಮೂಲಾಧಾರ ಚಕ್ರದಿಂದ ಪ್ರಾರಂಭಿಸಿ ಸಹಸ್ರಾರ ಚಕ್ರದವರೆಗೂ ಸ್ಥಾನಗಳನ್ನು ಹೊಂದಿರುವ 7 ಚಕ್ರಗಳು, ಅವುಗಳಿಗೇ ಪ್ರತ್ಯೇಕವಾಗಿ ಇರುವ ಬಣ್ಣ, ಮುದ್ರೆ, ಬೀಜಾಕ್ಷರ, ಹೊಂದಿಕೊಂಡಿರುವ ಪ್ರಮುಖ ದೇವರು, ಹಾಗೂ ಆಯಾ ಚಕ್ರಗಳನ್ನು ಸಕ್ರಿಯಗೊಳಿಸಿದಾಗ ವ್ಯಕ್ತಿಯ ದೇಹದ ಬೇರೆಬೇರೆ ಅಂಗಾಂಗಗಳಲ್ಲಿ ಆಗುವ ಬದಲಾವಣೆಗಳು, ಎಷ್ಟು ಸಮಯದವರೆಗೂ ಆಯಾ ಮುದ್ರೆಗಳನ್ನು ಮಾಡಬೇಕು ಎನ್ನುವುದರ ಬಗ್ಗೆಯೂ ಶ್ರೀಯುತರು ತಿಳಿಸಿಕೊಟ್ಟಿದ್ದು ಸಭಿಕರೆಲ್ಲರಿಗೂ ಸಂತೋಷ ನೀಡಿದ್ದು ಮಾತ್ರವಲ್ಲ, ಕುತೂಹಲವನ್ನು ಕೆರಳಿಸಿತು.
‘ಮುದ್ರಾ ಯೋಗ’ ಕೈಪಿಡಿ ಲೋಕಾರ್ಪಣೆ:
ದೇಲಂಪಾಡಿ ಅವರು ಸುಂದರವಾದ ಬಣ್ಣಗಳನ್ನು ಬಳಸಿ, ಹಲವಾರು ಪ್ರಮುಖ ಮುದ್ರೆಗಳನ್ನು ಚಿತ್ರ ಸಹಿತ ಹೊಸದಾಗಿ ಜನರ ಉಪಯೋಗಕ್ಕಾಗಿ ಬರೆದ, ‘ಮುದ್ರಾ ಯೋಗ’ ಕೈಪಿಡಿಯ ಪ್ರಯೋಜನವನ್ನು ಉಲ್ಲೇಖಿಸಿದರು. ಮುದ್ರಾ ಆಭ್ಯಾಸದಿಂದ ಉಂಟಾಗುವ ಪ್ರಯೋಜನಗಳು, ಮಾಡುವ ಸಮಯದ ಅವಧಿಯ ಬಗ್ಗೆ ವಿವರ ನೀಡಿರುವುದು. ಈ ಕೈಪಿಡಿಯನ್ನು ಶ್ರೀ ಪ್ರಸನ್ನ ವೀರಾಂಜನೆಯ ಸೇವಾ ದತ್ತಿಯ ಟ್ರಸ್ಟಿ ನಾಗೇಶ ರಾವ್ ಅವರು ಲೋಕಾರ್ಪಣೆ ಮಾಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು ನೂರು ಜನರಿಗೂ ಈ ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಯಿತು.
ವಿಶಿಷ್ಟ ಸಾಧನೆ ಮಾಡಿದ ಯೋಗ ಪಟುಗಳಿಗೆ ಪ್ರಮಾಣ ಪತ್ರ ವಿತರಣೆ:
ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಕಳೆದ ತಿಂಗಳು ಫೆಬ್ರುವರಿಯ 4 ರಂದು, ರಥಸಪ್ತಮಿಯ ದಿನ ಬೆಳಗ್ಗೆ 4.30 ಯಿಂದ ಸಂಜೆ 7.30 ರವಗೆ ಸತತವಾಗಿ 15 ಗಂಟೆಗಳ ಕಾಲ ೧೦೦೯ ಸೂರ್ಯ ನಮಸ್ಕಾರಗಳನ್ನು ಅರ್ಪಿಸಿದ 50 ಯೋಗಪಟುಗಳಿಗೆ ಪ್ರಮಾಣ ಪತ್ರಗಳನ್ನು ಗೋಪಾಲಕೃಷ್ಣ ದೇಲಂಪಾಡಿ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ದೇಲಂಪಾಡಿ ಅವರ ಸಹೋದರ ಸುರೇಶ ದೇಲಂಪಾಡಿ ಅವರು ಹಾಗೂ ಇಬ್ಬರು ಶಿಷ್ಯೆಯರಾದ ಶ್ರೀಲಕ್ಷ್ಮಿ, ರೋಷನಿ ಶೆಣೈ ಭಾಗವಹಿಸಿದ್ದರು.