
ಮಾ. 16ರಂದು ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ
ಮೂಡುಬಿದಿರೆ: ಕರಾವಳಿ ಕನಾ೯ಟಕ ಸಹಿತ ನೆರೆ ರಾಜ್ಯಗಳಾದ ಕೇರಳ, ಗೋವಾದಲ್ಲಿ ತನ್ನ ಕಣ್ಣಿನ ಚಿಕಿತ್ಸಾ ಕೇಂದ್ರಗಳನ್ನು ಹೊಂದಿ ಹೆಸರು ಗಳಿಸಿರುವ ಪ್ರಸಾದ್ ನೇತ್ರಾಲಯದ ಮೂಡುಬಿದಿರೆಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮಾ.16 ರಂದು ಬೆಳಿಗ್ಗೆ ಜೈನಪೇಟೆಯ ಬಡಗ ಬಸದಿ ಎದುರು ಇರುವ ಫಾರ್ಚೂನ್-2 ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2002 ರಲ್ಲಿ ಉಡುಪಿಯಲ್ಲಿ ಪ್ರಾರಂಭಗೊಂಡ ಈ ನೇತ್ರಾಲಯವು ಕಳೆದ 23 ವರ್ಷಗಳಿಂದ ಕಣ್ಣಿನ ಚಿಕಿತ್ಸೆಯಲ್ಲಿ ತನ್ನ ಪರಿಣತಿಯನ್ನು ಸ್ಥಾಪಿಸುವ ಮೂಲಕ ಮಂಗಳೂರು, ಸುಳ್ಯ, ತೀರ್ಥಹಳ್ಳಿ, ಶಿವಮೊಗ್ಗ, ಗೋವಾ, ಪುತ್ತೂರು ಹಾಗೂ ಕಾಸರಗೋಡಿನಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಹೊಂದಿದ್ದು ಇದೀಗ ಮೂಡುಬಿದಿರೆಯಲ್ಲಿ ಸೇವೆಗೆ ಮುಂದಾಗಿದೆ ಎಂದವರು ಮಾಹಿತಿ ನೀಡಿದರು.
ಈ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ, ರೆಟಿನಾ, ಗ್ಲಾಕೋಮಾ, ಮೆಳ್ಳೆಗಣ್ಣು, ಮಕ್ಕಳ ಕಣ್ಣಿನ ಚಿಕಿತ್ಸೆ, ಕಣ್ಣಿನ ಕರಿಗುಡ್ಡೆ ಚಿಕಿತ್ಸೆ, ಲೇಸರ್ ಚಿಕಿತ್ಸೆ, ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಗಳನ್ನೊಳಗೊಂಡಂತೆ ಲೇಸರ್ ಕಣ್ಣಿನ ಪೊರೆ ಚಿಕಿತ್ಸೆ, ಲಾಸಿಕ್ ಸ್ಮೈಲ್ ಮುಂತಾದ ಕನ್ನಡಕ ರಹಿತ ಮಾಡುವಂತಹ ಚಿಕಿತ್ಸೆ ,ವಿಶ್ವದಲ್ಲಿಯೇ ನೂತನ ತಂತ್ರಜ್ಞಾನದ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸೆ ಮುಂತಾದ ಎಲ್ಲಾ ವಿಭಾಗಗಳನ್ನೂ ಹೊಂದಿದ್ದು ಕಣ್ಣಿನ ಎಲ್ಲಾ ತೊಂದರೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ದೊರೆಯುವಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದ ಅವರು ಸಮಾಜದ ಕಟ್ಟಕಡೆಯ ಜನರಿಗೂ ಇದರ ಪ್ರಯೋಜನ ಸಿಗಬೇಕೆಂಬ ಉದ್ದೇಶದಿಂದ ಈ ಸೌಲಭ್ಯಗಳನ್ನು ಮೂಡುಬಿದಿರೆಯಲ್ಲೂ ಒದಗಿಸಲಾಗುತ್ತದೆ ಎಂದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವದಿಸಲಿದ್ದು ನೂತನ ಆಸ್ಪತ್ರೆಯನ್ನು ಡಾ.ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಅಭಯಚಂದ್ರ,ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್,ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಳೆದ 23 ವರ್ಷಗಳಲ್ಲಿ ಸುಮಾರು ಎರಡು ಲಕ್ಷದಷ್ಟು ಜನರ ಕಣ್ಣಿನ ಬೇರೆ ಬೇರೆ ರೀತಿಯ ಅಪರೇಷನ್ ಗಳನ್ನು ಮಾಡಲಾಗಿದ್ದು,ಹೆಚ್ಚಿನ ಅಪರೇಷನ್ ಗಳನ್ನು ಉಚಿತವಾಗಿಯೇ ಮಾಡಲಾಗಿದೆ, 40 ಸಾವಿರದಷ್ಟು ಉಚಿತ ಶಿಬಿರಗಳನ್ನು ಮಾಡಲಾಗಿದೆ ಎಂದ ಅವರು ಸಮಾಜದ ಎಲ್ಲಾ ವರ್ಗದ ಜನರಿಗೂ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ವಿಶ್ವದರ್ಜೆಯ ಫೆಸಿಲಿಟಿಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು. ಅಲ್ಲದೆ ಮಂಗಳೂರು, ಉಡುಪಿಯಿಂದ ವಾರದ ನಡುವೆ ನುರಿತ ತಜ್ಞರೂ ಮೂಡುಬಿದಿರೆಯ ಆಸ್ಪತ್ರೆಗೆ ಭೇಟಿ ಕೊಡಲಿದ್ದಾರೆಂದು ಮಾಹಿತಿ ನೀಡಿದರು.
ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್,ಪ್ರಸಾದ್ ನೇತ್ರಾಲಯ ಮೂಡುಬಿದಿರೆಯ ನಿರ್ದೇಶಕರಾದ ಡಾ. ಸ್ಮೃತಿ ಹಾಗೂ ಡಾ. ವಿಕ್ರಮ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು