
ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿಸಿ ದ.ಕ. ಜಿಲ್ಲಾಧಿಕಾರಿಗೆ ಭೂ ಮಾಲಕರಿಂದ ವೈಯಕ್ತಿಕ ಹಕ್ಕೋತ್ತಾಯ
Thursday, March 27, 2025
ಮೂಡುಬಿದಿರೆ: ದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಕುದ್ರಿಪದವು, ನಿಡ್ಡೋಡಿ, ಕಲ್ಲಮುಂಡ್ಕುರು, ಬಡಗ ಮಿಜಾರು ಪ್ರದೇಶದ ಭೂಮಾಲಕರು ಒಟ್ಟಾಗಿ ಇತ್ತೀಚಿಗೆ ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರನ್ನು ಭೇಟಿ ಮಾಡಿ ತಮ್ಮ ಕೃಷಿ ಭೂಮಿ ಮತ್ತು ವಾಸ್ತವ್ಯ ಪ್ರದೇಶದ ಮೂಲಕ ಪ್ರಸ್ತಾವಿತ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಅನುಷ್ಠಾನಕ್ಕೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿ, ಪ್ರತಿಯೊಬ್ಬರು ವೈಯಕ್ತಿಕ ಹಕ್ಕೋತ್ತಾಯ ಅರ್ಜಿಗಳನ್ನು ನೀಡಿ ಚರ್ಚೆ ನಡೆಸಿದರು.
ಭೂ ಮಾಲಕರ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಜಿಲ್ಲಾಧಿಕಾರಿ ಹೈ ಕೋರ್ಟ್ ಆದೇಶದನ್ವಯ ನಾವು ಕರ್ತವ್ಯ ಪಾಲನೆ ಮಾಡಲೇಬೇಕಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ತೋರಿಸಿದರು.
ದುಷ್ಟ ಸ್ಟೆರ್ ಲೈಟ್ ಕಂಪನಿ ಸಿಬ್ಬಂದಿಗಳು ಜಿಲ್ಲಾಧಿಕಾರಿ ಆದೇಶವಿದೆಯೆಂದು ಹೇಳಿಕೊಂಡು ಆದೇಶದ ಪ್ರತಿಯನ್ನು ತೋರಿಸಿ ಖಾಸಗಿ ಜಾಗದೊಳಗೆ ಬಲಾತ್ಕಾರವಾಗಿ ನುಗ್ಗಿ ನಮ್ಮೆಲ್ಲರ ವಿರೋಧವನ್ನು ದಿಕ್ಕರಿಸಿ ಕಾಮಗಾರಿ ನಡೆಸಲು ಪ್ರಯತ್ನ ಮಾಡುತ್ತಿರುವ ಬಗ್ಗೆ ವಿವರಿಸಿ, ನಿಮಗೆ ಹೈ ಕೋರ್ಟ್ ಆದೇಶವಿದೆಯೆಂದು ಭೂ ಮಾಲಕರ ಅಭಿಪ್ರಾಯವನ್ನೇ ಕೇಳದೇ, ಯಾವುದೇ ಮಾಹಿತಿ, ಅಧಿಕೃತ ನೋಟೀಸ್ ನೀಡದೇ ಹೇಗೆ ನೀವು ಕಂಪನಿಯವರಿಗೆ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ನಡೆಸಲು ಆದೇಶ ನೀಡಿದ್ದೀರಿ ಎನ್ನುವುದನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದಾಗ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಯವರು ನಾನು ಕೋರ್ಟ್ ಆದೇಶದನ್ವಯ ಸರಕಾರಿ ಜಾಗದಲ್ಲಿ ಕಾಮಗಾರಿ ನಡೆಸಲು ಮಾತ್ರ ಅದೇಶಿಸಿದ್ದೇನೆ ಹೊರತು ಖಾಸಗಿ ಜಾಗದಲ್ಲಿ ಭೂ ಮಾಲಕರ ಒಪ್ಪಿಗೆಯಿಲ್ಲದೆ ಯಾವುದೇ ಕಾರಣಕ್ಕೂ ಖಾಸಗಿ ಜಾಗಕ್ಕೆ ಪ್ರವೇಶ ಮಾಡಲು ಯಾ ಕಾಮಗಾರಿ ನಡೆಸಲು ಯಾವುದೇ ಆದೇಶ ನೀಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ರೈತ ಸಂಘದ ಪ್ರತಿನಿಧಿ ಸ್ಟೀವನ್, ಮಾತೃ ಭೂಮಿ ರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ ಡಿ’ಸೋಜ ನಿಡ್ಡೋಡಿ ಹಾಗೂ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಗಳ ಒಕ್ಕೂಟದ ಇನ್ನಾ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.