ಅತಿಕ್ರಮಿತ 16.5 ಎಕರೆ ಸ್ಥಳವೂ ದೇವಳದ ಸುಪರ್ದಿಗೆ: ಶಾಸಕ ಅಶೋಕ್ ರೈ

ಅತಿಕ್ರಮಿತ 16.5 ಎಕರೆ ಸ್ಥಳವೂ ದೇವಳದ ಸುಪರ್ದಿಗೆ: ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದ ಅತಿಕ್ರಮಿತ ಜಾಗವನ್ನೂ ಪೂರ್ಣವಾಗಿ ದೇವಳದ ಸುಪರ್ದಿಗೆ ಪಡೆದುಕೊಳ್ಳಲಾಗುವುದು. ದೇವಳದ ಹೆಸರಲ್ಲಿರುವ ಸುಮಾರು 16.5 ಎಕರೆ ಜಾಗ ಬೇರೆಯವರ ಸ್ವಾಧೀನದಲ್ಲಿದೆ. ತೆಂಕಿಲ, ನೆಲ್ಲಿಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಈ ಜಾಗಗಳಿದ್ದು, ಈಗಾಗಲೇ ಅಳತೆ ಮಾಡಲು ಆದೇಶ ಮಾಡಲಾಗಿದೆ. ದೇವಳದ ಜಾಗಗಳನ್ನು ಅತಿಕ್ರಮಣ ಮಾಡಿದವರಿಗೆ ಜಾಗ ಬಿಟ್ಟುಕೊಡುವಂತೆ ಮನವಿಯನ್ನೂ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ಅವರು ಹೇಳಿದರು.

ಪುತ್ತೂರು ದೇವಳದ ಹಿಂಬಾಗದ ದ್ವಾರದ ಬಳಿ ಮೂರು ಅಂಗಡಿಗಳನ್ನು ತೆರವು ಮಾಡುವ ಸಂದರ್ಭ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು.

ದೇವಳಕ್ಕೆ ಸೇರಿದ ಈ ಜಾಗಗಳನ್ನು ದೇವಳದ ಸುಪರ್ದಿಗೆ ಪಡೆದುಕೊಂಡ ಬಳಿಕ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಮಾದರಿಯಲ್ಲಿ ವಸತಿಗೃಹ ನಿರ್ಮಾಣ, ವಾಣಿಜ್ಯಸಂಕೀರ್ಣ, ಚೌಲ್ಟ್ರಿಗಳನ್ನು ಕಟ್ಟುವ ಕೆಲಸ ನಡೆಯಲಿದೆ. ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಇಲ್ಲಿ ದೇವಳದ ಎದುಭಾಗದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾಗದಂತೆ ಮಾಡಲು ಈ ಮೂರು ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಸ್ವಇಚ್ಛೆಯಿಂದ ಈ ಅಂಗಡಿಗಳನ್ನು ಹೊಂದಿದ್ದ ಮಾಲಕರು ಬಿಟ್ಟುಕೊಟ್ಟಿದ್ದಾರೆ. ಖ್ಯಾತ ವಕೀಲರಾದ ಕಿಶೋರ್ ಕೊಳತ್ತಾಯ, ಸುಬ್ರಹ್ಮಣ್ಯ ಕೊಳತ್ತಾಯ, ಮಧುರಾ ಸ್ವೀಟ್ಸ್ ಮಾಲಕರಾದ ವಿಠಲ್‌ದಾಸ್ ಹೆಗ್ಡೆ ಅವರು ಅತ್ಯಂತ ಪ್ರೀತಿಪೂರ್ವಕವಾಗಿ ಯಾವುದೇ ಫಲಾಪೇಕ್ಷೆಯೂ ಇಲ್ಲದೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಪುತ್ತೂರು ದೇವಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ಸುಬ್ರಹ್ಮಣ್ಯ ಕೊಳ್ಳತಾಯ ಹಿರಿಯ ವಕೀಲರು ಕಳೆದ 75 ವರ್ಷಗಳಿಂದ ಇಲ್ಲಿ ಇದ್ದಾರೆ. ಮನಸ್ಸು ಮಾಡಿದರೆ ಅವರು ಕೋರ್ಟಿಗೆ ಹೋಗಬಹುದಿತ್ತು. ಆದರೆ ಹಾಗೇನೂ ಮಾಡದೆ ಪ್ರೀತಿಯಿಂದ ಬಿಟ್ಟುಕೊಟ್ಟಿದ್ದಾರೆ. ದೇವಳದ ಸುತ್ತಮುತ್ತ ಇರುವ ಮನೆಗಳ ತೆರವು ಮಾಡಿದ ಬಳಿಕ ದೇವಾಲಯದ ವಾತಾವರಣವೇ ಬದಲಾಗಿದೆ. ಈ ತೆರವಾದ ಸ್ಥಳದಲ್ಲಿ ಈ ಬಾರಿ ಅನ್ನ ಪ್ರಸಾದ ವಿತರಣೆಯ ಕೆಲಸ ನಡೆಯಲಿದೆ. ಜಾತ್ರೆಯ ಹಿನ್ನಲೆಯಲ್ಲಿ ಮೊದಲು ಅನ್ನಪ್ರಸಾದ ವಿತರಣೆ ಮಾಡುತ್ತಿದ್ದ ಜಾಗದಲ್ಲಿ ನೂರು ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಎ.೩ಕ್ಕೆ ಏಲಂ ಪ್ರಕ್ರಿಯೆ ನಡೆಯಲಿದೆ. ಒಬ್ಬ ವ್ಯಕ್ತಿಗೆ ಕೇವಲ 2 ಅಂಗಡಿಗಳು ಮಾತ್ರ ನೀಡುವ ಚಿಂತನೆ ಮಾಡಿದ್ದೇವೆ. ಅಂಗಡಿಗಳನ್ನು 15 ಸಾವಿರಕ್ಕೆ ಪಡೆದುಕೊಂಡು 40 ಸಾವಿರ ಇನ್ನೊಬ್ಬರಿಗೆ ಕೊಡಲು ಈ ಬಾರಿ ಬಿಡುವುದಿಲ್ಲ. ದೇವರ ಜಾತ್ರೆ ಅತ್ಯಂತ ವೈಭವದಿಂದ ನಡೆಯಲಿ ಭಕ್ತಾಧಿಗಳು ಸಹಕರಿಸಬೇಕು ಎಂದು ಅವರು ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ, ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೇಡೇಕರ್ ಹಾಗೂ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article