
ಉಚ್ಛಾಟನೆ ‘ನಾಟಕ’ದ ಹಿಂದೆ ಬೆಳ್ತಂಗಡಿ ಶಾಸಕ: ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಪ್ರಸಾದ್ ಆರೋಪ
ಪುತ್ತೂರು: ಪಕ್ಷದಲ್ಲಿ ಯಾವ ಹುದ್ದೆಯನ್ನೂ ಪಡೆಯದಿದ್ದರೂ ಕೇವಲ ಪಕ್ಷದ ಕಾರ್ಯಕರ್ತನಾಗಿರುವ ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡುವ ಹುನ್ನಾರ ನಡೆಸಲಾಗಿದ್ದು, ಈ ಉಚ್ಛಾಟನೆಯ ನಾಟಕದ ಹಿಂದೆ ಬೆಳ್ತಂಗಡಿ ಶಾಸಕರ ಕೈವಾಡ ಇದೆ ಎಂದು ಉಪ್ಪಿನಂಗಡಿ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪಕ್ಷ ನಿಷ್ಠೆಯೊಂದಿಗೆ ಹಾಗೂ ಸಂಘದ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಸಹಕಾರಿ ಕ್ಷೇತ್ರಕ್ಕೆ ಮಾರಕವಾಗಬಹುದಾದ ಸಿಸಿಎ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾದಾಗ ಇದನ್ನು ಸಹಕಾರಿ ಕ್ಷೇತ್ರದ ಹಿತದೃಷ್ಟಿಯಿಂದ ಉಚ್ಛನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೆ. ಈ ಕಾರಣಕ್ಕಾಗಿ ನನ್ನ ಮೇಲೆ ಆಕ್ರೋಶಗೊಂಡು ಬೆಳ್ತಂಗಡಿ ಶಾಸಕರು ನನ್ನನ್ನು ಮಟ್ಟ ಹಾಕಲು ಹುನ್ನಾರ ನಡೆಸಿದ್ದಾರೆ. ಉಪ್ಪಿನಂಗಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ನನಗೆ ಸಹಕಾರಭಾರತಿ ವತಿಯಿಂದ ಸೀಟು ತಪ್ಪಿಸಿ ಅದಕ್ಕೆ ತನ್ನ ಆಪ್ತನೋರ್ವನಿಗೆ ಅವಕಾಶ ಕಲ್ಪಿಸಿದರು. ಆದರೆ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಕಾಣುವಂತಾಯಿತು ಎಂದು ಅವರು ತಿಳಿಸಿದರು.
ನನ್ನ ಪಾತ್ರ ಇಲ್ಲ..:
ಕಳೆದ ಒಂದೂವರೆ ವರ್ಷದಿಂದ ಬೆಳ್ತಂಗಡಿ ಶಾಸಕರು ಹಾಗೂ ಅವರ ಆಪ್ತ ಬೆಂಬಲಿಗರು ನನ್ನ ವಿರುದ್ಧ ಷಡ್ಯಂತ್ರ್ಯ ನಡೆಸುತ್ತಿದ್ದಾರೆ. ಇಳಂತಿಲ ಗ್ರಾಪಂ ಅಧ್ಯಕ್ಷರ ಪದಚ್ಯುತಿಯಲ್ಲಿ ನನ್ನ ಪಾತ್ರವೇನೂ ಇಲ್ಲ. ಆದರೆ ಜಾಲತಾಣಗಳಲ್ಲಿ ನಾನು ಇದರ ಹಿಂದೆ ಇದ್ದೇನೆ ಎಂಬಂತೆ ಬಿಂಬಿಸಲಾಯಿತು. ಬಿಜೆಪಿ ಸದಸ್ಯರ ನಡುವೆ ಇದ್ದ ಸಮಸ್ಯೆಯಿಂದಲೇ ಈ ಅವಿಶ್ವಾಸ ನಿರ್ಣಯ ಆಗಿದೆ. ಪಕ್ಷದಲ್ಲಿನ ಆಂತರಿಕ ಭೇಗುದಿಯೇ ಇದಕ್ಕೆ ಕಾರಣ. ಹೊರತು ಕೆಲವೊಂದು ಶಕ್ತಿಗಳು ಪ್ರಚಾರ ಮಾಡಿಸಿದಂತೆ ನನ್ನ ಪ್ರೇರಣೆ ಇಲ್ಲ. ಇದು ಸುಳ್ಳು ಆರೋಪಗಳು ಎಂದು ಅವರು ತಿಳಿಸಿದರು.
ಕಳೆದ 40 ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ನಾನು ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ. ಹುದ್ದೆಗಳಲ್ಲಿದ್ದರೆ ಉಚ್ಛಾಟನೆ ಮಾಡಬಹುದು. ಆದರೂ ಅದಕ್ಕೊಂದು ನಿಯಮವಿದೆ. ಆದರೆ ಈ ನಿಯಮಗಳನ್ನು ಸಂಪೂರ್ಣ ಉಲ್ಲಂಘನೆ ಮಾಡಿ ನನ್ನನ್ನು ಉಚ್ಛಾಟಿತ ಎಂಬ ನಾಟಕ ಮಾಡಲಾಗಿದೆ. ನಾನು ಕಾರ್ಯಕರ್ತ ಆಗುವುದನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದರು.
ಇಳಂತಿಲ ಗ್ರಾಪಂ ಸದಸ್ಯ ವಸಂತ ಕುಮಾರ್ ಮತ್ತು ಹಾಲು ಉತ್ಪಾದಕ ಸಂಘದ ನಿರ್ದೇಶಕ ವಸಂತ ಗೌಡ ಇದ್ದರು.