
ಪಿಪಿಸಿ ಸಂಧ್ಯಾ ಕಾಲೇಜಿನಲ್ಲೊಂದು ವಿನೂತನ ಕಾರ್ಯಕ್ರಮ: ತೆರೆದ ಗ್ರಂಥಾಲಯದ ಮೂಲಕ ಓದಿನತ್ತ ಸೆಳೆಯುವ ಪ್ರಯತ್ನ
Sunday, March 23, 2025
ಉಡುಪಿ: ಓದಿನಿಂದ ದೂರಾಗುತ್ತಿರುವ ಮಂದಿಯನ್ನು ಗ್ರಂಥಾಲಯದತ್ತ ಚಿತ್ತ ಹರಿಸುವಂತೆ ಮಾಡುವುದು ಹೇಗೆ? ಅವರಿಗೊಂದು ಪ್ರಶಾಂತ ವಾತಾವರಣ ಕಲ್ಪಿಸಿ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿನೂತನವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಸಂಧ್ಯಾ ಕಾಲೇಜಿನ ಗ್ರಂಥಾಲಯ ವಿಭಾಗದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳನ್ನು ಈ ಕಾರ್ಯಕ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಂಥಾಲಯದ ಮಹತ್ವ ಸಾರುವ ಕೆಲಸ ಮಾಡಲಾಗಿದೆ.
ಕಾಲೇಜಿನ ಪ್ರಶಾಂತವಾದ ಪರಿಸರದಲ್ಲಿ ತೆರೆದ ಗ್ರಂಥಾಲಯ ತೆರೆದು ಅಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಓದಿಗೆ ಅನುಕೂಲತೆ ಕಲ್ಪಿಸಲಾಗಿತ್ತು. ಹಿರಿಯ ನಾಗರಿಕರು ಕೂಡ ಇಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಅರ್ಥತಂದರು.
ಈ ಕಾರ್ಯಕ್ರಮದಲ್ಲಿ ಪಿಪಿಸಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ., ಸಂಧ್ಯಾ ಕಾಲೇಜಿನ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಅನಿಲ್ ಕುಮಾರ್ ಜೆ., ಇಕೋ ಕ್ಲಬ್ನ ಸಂಯೋಜಕ ಪ್ರೊ. ನಾಗರಾಜ್, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ರಾಘವೇಂದ್ರ ಎಲ್., ಹಿರಿಯ ನಾಗರಿಕರಾದ ಸುಬ್ರಹ್ಮಣ್ಯ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.