
ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ವಿಷುಹಬ್ಬದ ಉತ್ಸವ
ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ಉತ್ಸವ( ವಿಷುಹಬ್ಬ) ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಶ್ರೀ ಪರಮೇಶ್ವರ ದೇವರ ಬಲಿ ಉತ್ಸವ ಬಳಿಕ ದೇವರ ಉತ್ಸವ ಬಲಿ ಮೂರ್ತಿ ಕಾರಿಂಜಬೆಟ್ಟದಿಂದ ಕೆಳಗೆ ಇಳಿದು ಶ್ರೀ ಪಾರ್ವತಿ ಸನ್ನಿಧಿಗೆ ಆಗಮಿಸಿತು.
ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಪೂಜೆ ಬಳಿಕ ವಸಂತ ಮಂಟಪದಲ್ಲಿ ಶ್ರೀ ಪಾರ್ವತಿ ದೇವಿ ಸಹಿತ ಕಾರಿಂಜೇಶ್ವರನಿಗೆ ಪೂಜೆ ನಡೆಯಿತು. ನಂತರ ಪಾರ್ವತಿ-ಪರಮೇಶ್ವರ ಜತೆಗೂಡಿ ರಥಾರೂಢರಾಗಿ ರಥೋತ್ಸವ ನೆರವೇರಿತು.
ದೇಗುಲದ ಅರ್ಚಕರಾದ ಜಯಶಂಕರ ಉಪಾಧ್ಯಾಯ ಹಾಗೂ ಮಿಥುನ್ ರಾಜ್ ನಾವಡ ಮತ್ತು ಪುರೋಹಿತರಾದ ಬಾಲಕೃಷ್ಣ ಆಚಾರ್ಯ, ರಾಧಾಕೃಷ್ಣ ಮಯ್ಯ, ಪ್ರಭಾಕರ ಆಚಾರ್ಯ, ಮಹೇಶ್ ಮಯ್ಯ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ವಿದ್ವಾನ್ ಕೆ.ಎಲ್. ಆಚಾರ್ಯ ಹಾಗೂ ಯತಿರಾಜ ಆಚಾರ್ಯ ಅವರ ಬಳಗದವರಿಂದ ಪಂಚಾಂಗ ಶ್ರವಣ ಕಾರ್ಯಕ್ರಮ ನೆರವೇರಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಗ್ರಾಮಣಿಗಳಾದ ಗಣೇಶ ಮುಚ್ಚಿನ್ನಾಯ, ವೆಂಕಟರಾಜ ಎಳಚಿತ್ತಾಯ, ಲಕ್ಷ್ಮೀ ನಾರಾಯಣ ಆಚಾರ್ಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಕುಮಾರ್ ಅಮೀನ್, ಮಾಜಿ ಅಧ್ಯಕ್ಷರಾದ ಪಿ. ಜಿನರಾಜ ಆರಿಗ, ಶಿವಪ್ಪ ಗೌಡ ನಿನ್ನಿಕಲ್ಲು, ಬಂಟ್ವಾಳ ತಾ.ಪಂ. ಇಒ ಸಚಿನ್ ಕುಮಾರ್, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮಿ ಸಿ. ಬಂಗೇರ, ಎಂ. ಉದಯ ನಾಯಕ್, ಪ್ರೇಮನಾಥ ಪೀರ್ಯಗುತ್ತು, ಜನಾರ್ದನ ಆಚಾರ್ಯ ಬಾಳ್ತಬಲು, ದಯಾನಂದ ಶೆಟ್ಟಿ ಅಮೈ, ದೇವಸ್ಥಾನದ ಮ್ಯಾನೇಜರ್ ವಿನಯ ಕುಮಾರ್ ಮತ್ತು ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.