
ದುಶ್ಚಟಕ್ಕೆ ದಾಸನಾಗುವುದು ಸುಲಭ, ಅದರಿಂದ ಹೊರಬರುವುದು ಕಷ್ಟ: ಡಾ. ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ವ್ಯಸನಕ್ಕೊಳಗಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ಪ್ರೇರಣೆ ಕೊಟ್ಟು ಮನಃಪರಿವರ್ತನೆ ಮಾಡಲಾಗುತ್ತಿದೆ. ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಸುಲಭವಾಗಿ ಅಂಟಿಕೊಳ್ಳುತ್ತದೆ ಆದರೆ ಅದನ್ನು ಬಿಡಲು ಕಷ್ಟ ಪಡಬೇಕಾಗುತ್ತದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆ ಲಾಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 245ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.
ದುಶ್ಚಟಕ್ಕೆ ಬಲಿಯಾದವರು ತನ್ನ ಕುಟುಂಬಕ್ಕೆ ಪ್ರೀತಿ ತೋರಿಸುವ ಮತ್ತು ಹಣ ಖರ್ಚು ಮಾಡುವ ಬದಲು ತನ್ನ ಸ್ನೇಹಿತರಿಗೆ ಹೆಚ್ಚು ಪ್ರೀತಿ ಮಾಡುತ್ತಾರೆ ಮತ್ತು ಖರ್ಚು ಮಾಡುತ್ತಾರೆ. ಕುಡಿತದಿಂದ ಆರೋಗ್ಯ ಹಾಳಾಗುವುದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ. ದೃಢವಾದ ಸಂಕಲ್ಪದಿಂದ ಮತ್ತು ಮನಃಪರಿವರ್ತನೆಯಿಂದ ದುಶ್ಚಟ ದೂರ ಮಾಡಲು ಸಾಧ್ಯ ಎಂದರು.
ತನ್ನಲ್ಲಿರುವ ಅಹಂಕಾರ ಹಾಗೂ ದುಶ್ಚಟ ದೂರ ಮಾಡಿದಾಗ ಮಾತ್ರ ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಸಾಧ್ಯ ಎಂದು ಮಾರ್ಗದರ್ಶನ ನೀಡಿದರು.
ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್, ಹೆಗ್ಗಡೆ ಅವರ ಕಚೇರಿ ಪ್ರಬಂಧಕ ರಾಜೇಂದ್ರ ದಾಸ್, ವೇದಿಕೆಯ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿಯವರಾದ ನಂದಕುಮಾರ್, ರಮೇಶ್, ದಿನೇಶ್ ಮರಾಠಿ, ನಾಗೇಂದ್ರ ಮತ್ತು ಆರೋಗ್ಯ ಸಹಾಯಕರಾದ ಪ್ರೆಸಿಲ್ಲಾ ಡಿ’ಸೋಜ, ನೇತ್ರಾವತಿ ಹಾಗೂ ಜಯಲಕ್ಷ್ಮೀ, ಆಪ್ತಸಮಾಲೋಚಕ ಜಿ.ಆರ್. ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಉಪಸ್ಥಿತರಿದ್ದರು.
ಮುಂದಿನ ವಿಶೇಷ ಶಿಬಿರವು ಏ.21 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.