
ಬಪ್ಪನಾಡು ಜಾತ್ರೋತ್ಸವ: ಮುರಿದ ರಥದ ಮೇಲ್ಭಾಗ, ತಪ್ಪಿದ ಅನಾಹುತ
ಬಪ್ಪನಾಡು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಬಾಗ ಮುರಿದು ಬಿದ್ದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಈ ವೇಳೆ, ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಹಾಗೂ ಅರ್ಚಕರು ರಥದಲ್ಲೇ ಇದ್ದರು. ಆದರೆ, ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕೂರಿಸಿ ಉತ್ಸವ ಮುಂದುವರಿಸಿ, ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಉತ್ಸವ ಸಂದರ್ಭದಲ್ಲೇ ಬ್ರಹ್ಮರಥ ಮುರಿದು ಬಿದ್ದಿರುವುದು ಭಕ್ತರ ಮತ್ತು ಕ್ಷೇತ್ರದವರ ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಶಯನೋತ್ಸವ ಬಹಳ ಪ್ರಸಿದ್ಧವಾಗಿದೆ. ದೇವಿ ಮಲ್ಲಿಗೆ ಹೂಗಳ ಮೇಲೆ ಪವಡಿಸುತ್ತಾರೆ ಎಂಬ ನಂಬಿಕೆಯಿದೆ.
ದೋಷ..ಅಪಶಕುನ..
ರಥೋತ್ಸವದ ವೇಳೆ ರಥ ಮುರಿದು ಬಿದ್ದ ಅವಘಡ ಈಗ ಕರಾವಳಿಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಯಾವುದೋ ದೋಷವಿರಬೇಕು. ದೇವಿ ಮುನಿಸಿಕೊಂಡಿದ್ದಾಳೆ. ಇದು ಅಪಶಕುನದ ಸೂಚನೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ’ದೇವಿ ಒಂದು ಸಂದೇಶ ಕೊಟ್ಟಿದ್ದಾಳೆ, ಸರಿ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದಾಳೆ’ ಎಂದು ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಭಕ್ತರು ಹೇಳಿದ್ದಾರೆ.
ಬಪ್ಪನಾಡು ಕ್ಷೇತ್ರದ ರಥೋತ್ಸವದಲ್ಲಿ ನಡೆದ ದುರ್ಘಟನೆ ಇದೇ ಮೊದಲಲ್ಲ. ಕಳೆದ ಬಾರಿ ಇದಕ್ಕಿಂತ ದೊಡ್ಡ ದುರಂತ ಸಂಭವಿಸುತ್ತಿತ್ತು. ಕಳೆದ ಬಾರಿ ರಥ ಒಂದು ಕಡೆ ವಾಲಿ ದುರಂತ ಸಂಭವಿಸಿತ್ತು. ದೊಡ್ಡ ದುರ್ಘಟನೆ ತಪ್ಪಿ ಹೋಗಿತ್ತು, ಇದು ಒಂದು ರೀತಿಯಲ್ಲಿ ನಿರ್ಲಕ್ಷ್ಯದಿಂದ ಆಗಿದೆ, ಎಲ್ಲರೂ ಕೆಲಸ ಮಾಡಿದ್ದಾರೆ. ರಥದ ಮರದ ಅವಧಿ ಕಳೆದಿದೆ, ಗೆದ್ದಲು ಬಂದಿತ್ತು. ಹೀಗಾಗಿ ಶಕ್ತಿ ಹೀನವಾಗಿತ್ತು. ಗೆದ್ದಲು ಹಿಡಿದ ಮರವನ್ನ ಯಾಕೆ ದುರಸ್ತಿ ಮಾಡಿಲ್ಲ? ಇಷ್ಟು ಭಾರವಾದ ರಥ ಎಳೆಯುವಾಗ ಎಷ್ಟು ಒತ್ತಡ ಬಿದ್ದಿರಬಹುದು? ಒಂದು ಕ್ಷೇತ್ರಕ್ಕೆ ಬ್ರಹ್ಮರಥ ಕೀರ್ತಿ ಕಲಶವಿದ್ದಂತೆ, ಅ ಕಲಶ ಬಿದ್ದು ಹೋಗುವುದು ಸರಿಯಲ್ಲ. ಅಪಶಕುನದಲ್ಲಿ ದೊಡ್ಡ ಅಪಶಕುನವದು, ದೇವಿಗೆ ಕೋಪವಿರಬಹುದು. ಆಕೆ ಏನೋ ಅಪೇಕ್ಷೀಸುತ್ತಿದ್ದಾಳೆ ಎಂದು ಅನಿಸುತ್ತೆ, ಪ್ರಶ್ನಾ ಚಿಂತನೆಯಲ್ಲಿ ವಿಮರ್ಶೆ ಮಾಡಿ ನೋಡಬೇಕು ಎನ್ನುತ್ತಾರೆ.
ತಪ್ಪಿದ ಭಾರೀ ಅನಾಹುತ..
ರಾತ್ರಿ ಸುಮಾರು 1.40-2 ಗಂಟೆಗೆ ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿತವಾಗಿ ಬಿದ್ದಿದೆ. ರಥದ ಕೆಳಗಡೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ತೇರಿನ ಮೇಲ್ಬಾಗ ಕುಸಿಯುವ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ, ಪ್ರಾಣಹಾನಿಯಾಗಿಲ್ಲ.